ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ನಡೆಯುವ ಅಕ್ರಮ ಕಲ್ಲು ಗಣಿಗಾರಿಕೆಗೆ ಒಬ್ಬ ಅಮಾಯಕ ಬಲಿಯಾಗಿದ್ದು, ಈ ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ, ಇಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಜರುಗಿಸುವಂತೆ ಆಗ್ರಹಿಸಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುವುದೆಂದು ಕಾರ್ಕಳ ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಅಕ್ರಮ ಕಲ್ಲುಗಣಿಗಾರಿಗೆ ನಡೆಯುವ ಮತ್ತು ಅದರಿಂದಾಗುವ ಅನಾಹುತಗಳ ಬಗ್ಗೆ ವಾರದ ಹಿಂದೆಯಷ್ಟೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಆದರೆ ಗಣಿ ಅಧಿಕಾರಿಗಳು ಮತ್ತು ತಾಲೂಕು ಹಿರಿಯ ಅಧಿಕಾರಿಗಳ ನಿರ್ಲಕ್ಷ ಮತ್ತು ವಿಳಂಬ ನೀತಿಗೆ ಕಾರ್ಮಿಕನೊಬ್ಬ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳಬೇಕಾಯಿತು ಇಂತಹ ಅಧಿಕಾರಿಗಳು ಮತ್ತು ಅಕ್ರಮ ಗಣಿಗಾರಿಕೆ ನಡೆಸುವ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮವಾಗಬೇಕು ಇಲ್ಲವಾದರೆ ಮುಂದೆಯೂ ಇಂತಹ ಅನಾಹುತ ನಡೆಯುವ ಆತಂಕವಿದೆ ಎಂದರು.
ಉಡುಪಿಗೆ ಭೇಟಿ ನೀಡಿರುವ ಸಿಎಂ ಸಾರ್ವಜನಿಕರ ಸಮಸ್ಯೆ ಸ್ಪಂದಿಸದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು ಅದೇ ದಿನ ಇಂತಹ ಘಟನೆ ನಡೆದಿರುವುದು ವಿಪರ್ಯಾಸ. ಈ ಘಟನೆಯ ಕುರಿತು ಮುಖ್ಯ ಮಂತ್ರಿಯವರಿಗೆ ಸಂಪೂರ್ಣ ಮಾಹಿತಿ ನೀಡಿ ಕಠಿಣ ಕ್ರಮಕ್ಕೆ ಮನವಿ ಮಾಡುವುದಾಗಿ ಶುಭದ ರಾವ್ ತಿಳಿಸಿದ್ದಾರೆ