ಬೆಂಗಳೂರು : ಬೆಂಗಳೂರು ನಗರದಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಇ-ತೋಯ್ಬಾ (ಎಲ್ಇಟಿ) ಸಂಘಟನೆಯ ಐವರು ಶಂಕಿತ ಉಗ್ರರ ಬಂಧನವಾದ ಬೆನ್ನಲ್ಲೇ ಉಗ್ರರ ಸಂಪರ್ಕ ಜಾಲವನ್ನು ಬೇಧಿಸಲು ಇದೀಗ ಅವರ ಮೊಬೈಲ್ನಲ್ಲಿ ಅಡಕವಾಗಿರುವ ರಹಸ್ಯಗಳನ್ನು ಸಿಸಿಬಿ ಶೋಧಿಸುತ್ತಿದೆ.
ಪ್ರಮುಖ ಆರೋಪಿ ಜುನೈದ್ಗೆ ಓರ್ವ ಗರ್ಲ್ ಫ್ರೆಂಡ್ ಕೂಡ ಇದ್ದು, ಪ್ರಕರಣಕ್ಕೂ ಮುನ್ನ ಜುನೈದ್ ಆಕೆಯ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದ ಎನ್ನುವ ವಿಚಾರ ತನಿಖೆಯ ವೇಳೆ ವೆಳಕಿಗೆ ಬಂದಿದೆ. ಆದರೆ ಕೇಸ್ ಬೆಳಕಿಗೆ ಬಂದ ಬಳಿಕ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾನೆ. ಈ ಬಗ್ಗೆ ಯುವತಿ ಬಳಿ ತನಿಖಾ ತಂಡ ಮಾಹಿತಿ ಕಲೆ ಹಾಕಿದೆ. ಆದರೆ ಯುವತಿಗೆ ಜುನೈದ್ ಉಗ್ರ ಚಟುವಟಿಕೆ ಬಗ್ಗೆ ಮಾಹಿತಿ ಇಲ್ಲ.
ಸಿಸಿಬಿ ತನಿಖೆ ವೇಳೆ ಜುನೈದ್ ತನ್ನ ಒರಿಜಿನಲ್ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಹಾರಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. 2017ರಲ್ಲಿ ಕೊಲೆ ಕೇಸ್ ದಾಖಲಾಗುವ ಮೊದಲೇ ಜುನೈದ್ ಪಾಸ್ ಪೋರ್ಟ್ ಹೊಂದಿದ್ದ. ಆದರೆ ಕೇಸ್ ನಲ್ಲಿ ಯಾವುದೇ ಇಂಟರ್ನ್ಯಾಷನಲ್ ಲಿಂಕ್ ಇಲ್ಲದ ಕಾರಣ ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. ಬಳಿಕ ದುಬೈ ವೀಸಾ ಪಡೆದು ಹೋಗಿದ್ದ. ನಂತರ ದುಬೈ ನಿಂದ ಮಿಡಲ್ ಈಸ್ಟ್ ನಲ್ಲಿಯೇ ಇರುವ ಅಜೆರ್ಬೈಜಾನ್ ದೇಶದ ಬಾಕು ಎಂಬ ನಗರದಲ್ಲಿ ಇದ್ದಾನೆ ಎಂಬ ಬಗ್ಗೆ ಮಾಹಿತಿ ಇದೆ. ಸದ್ಯ ಇಂಟರ್ ಪೋಲ್ ಮೂಲಕ ಜುನೈದ್ ಪತ್ತೆ ಮಾಡಲು ಯತ್ನಿಸಲಾಗುತ್ತಿದೆ.
ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾಗ ಹೆಬ್ಬಾಳ ಸಮೀಪದ ಸುಲ್ತಾನ್ಪಾಳ್ಯದ ಸೈಯದ್ ಸುಹೇಲ್ಖಾನ್ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಸುಹೇಲ್, ಪುಲಕೇಶಿ ನಗರದ ಮೊಹಮದ್ ಫೈಜಲ್ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಆರ್.ಟಿ.ನಗರದ ಸೈಯದ್ ಮುದಾಸೀರ್ ಪಾಷ ಬಂಧಿಸಿದ ಪೊಲೀಸರು, ಆರೋಪಿಗಳಿಂದ 7 ನಾಡಾ ಪಿಸ್ತೂಲ್ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಡ್ಯಾಗರ್ ಹಾಗೂ 12 ಮೊಬೈಲ್ಗಳನ್ನು ಜಪ್ತಿ ಮಾಡಿದ್ದರು. ಈ ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಎಲ್ಇಟಿ ಉಗ್ರ ಮಹಮ್ಮದ್ ಜುನೈದ್ ಆಗಿದ್ದಾನೆ.