ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ಪೊಲೀಸರ ಕ್ರಮ ಖಂಡನೀಯ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ.
ಇದು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ ಗೋರಕ್ಷಣೆಯ ಕಾರ್ಯವನ್ನು ಮಾಡಿದ ಕಾರಣಕ್ಕೆ ಹಾಗೂ ಹೋಳಿ ಆಚರಣೆಯ ನೆಪದಲ್ಲಿ ಡ್ರಗ್ಸ್ ಪಾರ್ಟಿಯನ್ನು ತಡೆದ ಕಾರಣಕ್ಕೆ ಅವರನ್ನು ಗಡಿಪಾರು ಮಾಡುವುದು ಖಂಡನೀಯ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕುವುದು, ಅವರಿಗೆ ತೊಂದರೆ ನೀಡುವುದು ಹೆಚ್ಚಾಗಿದೆ. ಮತ್ತೊಂದು ಕಡೆ ಮತಾಂಧರ ಆಕ್ರಮಣ ಹಿಂದೂಗಳ ಮೇಲೆ ಹೆಚ್ಚಾಗಿದೆ.
ಈ ಹಿಂದೆ ಇದೇ ಸರಕಾರವು ಮತಾಂಧ ಸಂಘಟನೆಯಾದ ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಾಸು ಪಡೆದಿತ್ತು. ಪಿಎಫ್ಐ ಸಂಘಟನೆ ಕಾರ್ಯಕರ್ತರು ರಾಜ್ಯದಾದ್ಯಂತ ನೈತಿಕ ಪೋಲಿಸಗಿರಿ ನೆಪದಲ್ಲಿ ಚಿಕ್ಕಬಳ್ಳಾಪುರ, ಕಲಬುರ್ಗಿ, ಮಂಗಳೂರು ಹೀಗೆ ಹಲವು ಕಡೆ ಅಮಾಯಕ ಹಿಂದುಗಳ ಮೇಲೆ ಆಕ್ರಮಣ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಇಂತಹ ಮತಾಂಧ ಪಿಎಫ್ಐ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶವನ್ನು ಸರಕಾರ ಮಾಡಿದೆಯೇ? ಎಂದು ಪ್ರಶ್ನಿಸಿರುವ ಅವರು ಈ ಕೂಡಲೇ ಸರಕಾರ ಗಡಿಪಾರು ಆದೇಶವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.