ಕಾರ್ಕಳ : ಕಾರ್ಕಳ ಕ್ಷೇತ್ರದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿದೆ. ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಪ್ರತಿಮೆಯುಳ್ಳ ಥೀಮ್ ಪಾರ್ಕ್ ಗೆ ಭೇಟಿ ನೀಡಿ ತುಂಬಾ ಸಂತಸವಾಗಿದೆ. ನಿಜಕ್ಕೂ ದೂರದೃಷ್ಟಿಯ ಯೋಜನೆಯಿದು. ಯಾಕೆಂದರೆ ನಾಡಿನ ಸಂಸ್ಕೃತಿ – ಪರಂಪರೆ ಎರಡೂ ಉಳಿಸುವ ಕಾರ್ಯ ಇಲ್ಲಿ ನಡೆದಿದೆ.ಇಂತಹ ಶ್ರಮಜೀವಿ, ಅಭಿವೃದ್ಧಿಯಲ್ಲಿ ಹೊಸತನ ಹುಡುಕುವ ಮತ್ತೊಬ್ಬ ಕನಸುಗಾರ ಶಾಸಕ ಸಿಗುವುದು ಕಷ್ಟ. ಹಾಗಾಗಿ ಕ್ಷೇತ್ರದ ಜನ ಮತ್ತೊಮ್ಮೆ ಸುನಿಲ್ ಕುಮಾರ್ರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮುಂಬಯಿ ಬೊರಿವಲಿ ಕ್ಷೇತ್ರದ ಸಂಸದ ಗೋಪಾಲ ಶೆಟ್ಟಿ ಹೇಳಿದರು.
ಅವರು ತಾಲೂಕಿನ ಮಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಪರ ಮತಯಾಚಿಸಿ ಮಾತನಾಡಿದರು. ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ ದಿನ ನಾನು ಬರಬೇಕಿತ್ತು. ಮೋದಿಯವರ ಭೇಟಿ ನಿಮಿತ್ತ ಅಂದು ಸಾಧ್ಯವಾಗಿಲ್ಲ. ಥೀಂ ಪಾರ್ಕ್ ಡೆವಲಪ್ಮೆಂಟ್ ಬಗ್ಗೆ ಮುಂಬಯಿನ ಪ್ರತಿಯೊಬ್ಬರಿಗೂ ತಿಳಿದಿದೆ. ಮುಂಬಯಿನAತಹ ಮಹಾನಗರದಲ್ಲಿ ನಗರದಲ್ಲಿ ೨೫ಕ್ಕೂ ಅಧಿಕ ಮಹಾಪುರುಷರ ಪ್ರತಿಮೆ ಸ್ಥಾಪಿಸಿದ್ದು ಕಂಡಿದ್ದೇನೆ. ಅದು ಎಲ್ಲ ಸೇರಿದರೂ ಪರಶುರಾಮ ಥೀಂ ಪಾರ್ಕ್ಗೆ ಸಮವಾಗದು ಎಂದರು.
ಅಭ್ಯರ್ಥಿ ವಿ. ಸುನಿಲ್ ಕುಮಾರ್ ಮಾತನಾಡಿ ಈದು-ಮಾಳದಂತಹ ಗ್ರಾಮೀಣ ಭಾಗದ ರಸ್ತೆಗಳಿಗೆ ಕಾಯಕಲ್ಪ, ಸೇತುವೆ ನಿರ್ಮಾಣ, ಕಿಂಡಿಅಣೆಕಟ್ಟು, ವಿದ್ಯುತ್ ಸಮಸ್ಯೆಗೆ ಪರಿವರ್ತಕ, ಸಬ್ ಸ್ಟೇಶನ್, ಬಡವರಿಗೆ ಹಕ್ಕುಪತ್ರ ವಿತರಣೆ ಮೊದಲಾದ ಮೂಲಭೂತ ಸೌಕರ್ಯ ಕಲ್ಪಿಸಿ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಿದ್ದೇನೆ. ಮತ್ತೊಮ್ಮೆ ಆಶಿರ್ವದಿಸಿದರೆ ಗ್ರಾಮಗಳ ಕಲ್ಯಾಣಕ್ಕೆ ಭರಪೂರ ಕೊಡುಗೆ ನೀಡುವುದಕ್ಕೆ ಅವಕಾಶವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರೋಹಿತ್ ಹೆಗಡೆ ಎರ್ಮಾಳ್, ಹರೀಶ್ ಶೆಟ್ಟಿ ಎರ್ಮಾಳ್, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು