ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುನಿಯಾಲು ಗಣೇಶ ಶೆಣೈ ಆಯ್ಕೆಯಾಗಿರುತ್ತಾರೆ.
ಗಣೇಶ ಶೆಣೈ ಯವರು ಮುನಿಯಾಲು ಪದ್ಮನಾಭ ಶೆಣೈ ಮತ್ತು ಸುಮತಿ ದಂಪತಿಗಳ ಪುತ್ರನಾಗಿ ಕಬ್ಬಿನಾಲೆಯಲ್ಲಿ ಜನಿಸಿದರು.
ಇವರು ಪ್ರಕಾಶಕರಾಗಿ 40 ವರ್ಷಗಳಿಂದ ನೂರಾರು ಪುಸ್ತಕಗಳ ಪ್ರಕಟಣೆ, ಲೇಖಕರಾಗಿ ಹೊಸದಿಗಂತ, ವಿಕ್ರಮ ಪತ್ರಿಕೆಗೆ ಅಂಕಣ ಬರೆಹಗಾರರಾಗಿ ಇತರ ಪತ್ರಿಕೆ ಸೇರಿ ಮೂರು ಸಾವಿರಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಸಸ್ಯ ಸಂಪದ, ವಿಜ್ಞಾನ ಲೇಖನ, ಪ್ರವಾಸ ಸಾಹಿತ್ಯ ಹೀಗೆ 115 ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ರಾಜ್ಯ ಸರಕಾರದ ಮಾಧ್ಯಮ ಪ್ರಶಸ್ತಿ, ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಟ ವಿಜ್ಞಾನ ಸಾಹಿತಿ ಪ್ರಶಸ್ತಿಗಳ ಪುರಸ್ಕೃತರಾಗಿದ್ದಾರೆ.ಇವರ ಸಾಹಿತ್ಯ, ಸೇವೆಯನ್ನು ಪರಿಗಣಿಸಿ ಹೆಬ್ರಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ ನೇತೃತ್ವದ ಸಮಿತಿ ಆಯ್ಕೆಮಾಡಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮತ್ತು ಹೆಬ್ರಿ ತಾಲೂಕು ಉಸ್ತುವಾರಿ ಪಿ. ವಿ. ಆನಂದ ಸಾಲಿಗ್ರಾಮ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.