Share this news

ಕಾರ್ಕಳ : ಚುನಾವಣೆಯಲ್ಲಿ ಕಾರ್ಯಕರ್ತರು ಒಂದು ಪಕ್ಷದ ಪರ ಮತ್ತು ವಿರುದ್ದ ಕೆಲಸ ಮಾಡುವುದು ಸಾಮಾನ್ಯ. ಆದರೆ ನನ್ನ ವಿರುದ್ಧ ಕೆಲಸ ಮಾಡಿದವರನ್ನು ನೋಡಿಕೊಳ್ಳುತ್ತೇನೆ ಎಂದು ವಿಜಯೋತ್ಸವದಲ್ಲಿ ಶಾಸಕ ಸುನೀಲ್ ಕುಮಾರ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದು,ಅವರ ವಿರುದ್ಧ ಪೋಲಿಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಆಗ್ರಹಿಸಿದ್ದಾರೆ.

ಆವರು ಸೋಮವಾರ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಶಾಸಕರೇ ನಿಮ್ಮ ಮಾತುಗಳು ಹತಾಶೆಯ ಪ್ರತೀಕವಾಗಿದೆ. ಬೆದರಿಕೆಗಳಿಗೆ ಹೆದರುವ ಕಾರ್ಯಕರ್ತರು ನಾವಲ್ಲ ನಿಮ್ಮನ್ನು ಎದುರಿಸುವ ಶಕ್ತಿ ನಮ್ಮಲ್ಲಿದೆ. ಇನ್ನು ಮುಂದೆ ಮಾತನಾಡುವಾಗ ಎಚ್ಚರವಿರಲಿ ಎಂದರು.

ಟೈಗರ್ ಗ್ಯಾಂಗ್ ಹೆಸರಿನಲ್ಲಿ ಮುತಾಲಿಕರು ಹಿಂದೂಗಳ ಹತ್ಯೆ ಮಾಡಿದ್ದಾರೆ ಎಂಬ ತಮ್ಮ ಹೇಳಿಕೆ ಆಶ್ಚರ್ಯ ತಂದಿದೆ. ಆ ಬಗ್ಗೆ ದಾಖಲೆ ಇದೆ ಎನ್ನುತ್ತೀರಿ ಅದನ್ನು ಯಾಕೆ ಬಹಿರಂಗಪಡಿಸಿಲ್ಲ, ಹತ್ಯೆ ಬಗ್ಗೆ ಮಾಹಿತಿ ಇದ್ದರೂ ಮೌನ ವಹಿಸಿರುವುದೂ ಅಪರಾಧವಲ್ಲವೇ ಎಂದು ಪ್ರಶ್ನಿಸಿರುವ ಶುಭದ್ ಈ ಬಗ್ಗೆ ಶಾಸಕರನ್ನು ಸಾಕ್ಷಿಯಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ನಿಮ್ಮ ವಿರುದ್ದ ಮಾಡಿದ ಭ್ರಷ್ಟಾಚಾರ ಅರೋಪ ಎಲ್ಲವೂ ಸತ್ಯವಾಗಿದ್ದು ಅದಕ್ಕೆ ಇನ್ನೂ ಬದ್ದವಾಗಿದ್ದೇನೆ ಆದರೆ ಅದಕ್ಕೆ ಉತ್ತರಿಸುವ ಧೈರ್ಯ ನಿಮಗಿಲ್ಲ. ಇನ್ನು ನಿಮ್ಮ ಭ್ರಷ್ಟಾಚಾರ ಬಯಲಿಗೆಳೆಯಲು ಭ್ರಷ್ಟಾಚಾರ ವಿರೋಧಿ ಸಮಿತಿಯನ್ನೇ ರಚನೆ ಮಾಡುತ್ತೇವೆ ಅದರಿಂದ ನಿಮ್ಮ ಬಂಡವಾಳ ಎಲ್ಲಾ ಹೊರಬರಲಿದೆ. ನನ್ನನ್ನು ಚಿಲ್ಲರೆ ನಾಯಕ ಎಂದಿರಿ ಹೌದು ನಾನು ಚಿಲ್ಲರೆ ನಾಯಕನೇ ಯಾಕೆಂದರೆ ನನ್ನಲ್ಲಿ ಇರುವುದು ಚಿಲ್ಲರೆ ಹಣ, ನಿಮ್ಮ ಹಾಗೆ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವೂ ಇಲ್ಲ ಅಕ್ರಮ ಆಸ್ತಿಯೂ ಇಲ್ಲ, ಯಾರೋ ಕೊಟ್ಟ ಡೈಮಂಡ್ ನೆಕ್ಲೆಸ್ ಸಹ ಇಲ್ಲ. ಈವರೆಗೆ ಯಾವುದೇ ಅರೋಪ ಇಲ್ಲದೇ ಪ್ರಮಾಣಿವಾಗಿ ಸೇವೆ ಮಾಡುತ್ತಾ ಬಂದಿದ್ದೇನೆ ಇನ್ನೂ ಮಾಡುತ್ತೇನೆ ಎಂದರು.

ಮಾತಿನಲ್ಲಿ ನಾವು ಯಾರು ಸಭ್ಯತೆ ಮೀರಿಲ್ಲ ಅದು ನಮ್ಮ ಸಂಸ್ಕೃತಿಯೂ ಅಲ್ಲ, ಆದರೆ ಗೋಪಾಲ ಭಂಡಾರಿಯವರ ಬಗ್ಗೆ ಅವಹೇಳನವಾಗಿ ಮಾತನಾಡುವಾಗ, ಬಂಡಿಮಠದಲ್ಲಿ ಹಗಲು ರಾತ್ರಿ ಧರಣಿ ಮಾಡಿ ವೀರಪ್ಪ ಮೊಯಿಲಿಯವರನ್ನು ಹೀಯಾಳಿಸಿದಾಗ, ಸಿದ್ದರಾಮಯ್ಯ ಸೆಗಣಿ ತಿನ್ನಿ ಎಂದಾಗ ಕಾಂಗ್ರೆಸಿಗರು ನಪುಂಸಕರು ಎಂದಾಗ ನಿಮ್ಮ ಸಭ್ಯತೆ ಎಲ್ಲಿ ಹೋಗಿತ್ತು. ನಮ್ಮ ಅಭ್ಯರ್ಥಿ 20 ದಿನದಲ್ಲಿ ಬಂದವರು ಎಂದು ಹೀಯಾಳಿಸಿರುವ ನೀವು ಅವರ ಸಾಮಾಜಿಕ ಸೇವೆಯ ಎದುರು ನಗಣ್ಯ. ಅವರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಜನಸೇವೆ ಮಾಡುತ್ತಿದ್ದಾರೆ. ಎಷ್ಟೋ ಮನೆಗೆ ಬೆಳಕಾಗಿದ್ದಾರೆ. ಅವರು ಎಲ್ಲಾ ಕ್ಷೇತಗಳಲ್ಲಿ ನೀಡಿದ ಕೊಡುಗೆ ಎದುರು ನೀವು ಲೆಕ್ಕಕ್ಕೇ ಇಲ್ಲ ನಿಮಗೆ ಆ ಅರ್ಹತೆಯೂ ಇಲ್ಲ. ನಿಮ್ಮ ಪರ ಚಲಾವಣೆಯಾದ ಮತಕ್ಕಿಂತ ನಿಮ್ಮ ವಿರುದ್ದ ಚಲಾವಣೆಯಾದ ಮತಗಳೇ ಹೆಚ್ಚು ಎಂಬುದು ನೆನಪಿರಲಿ ಎಂದು ಕುಟುಕಿದರು.

ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ, ನಗರ ಹಿಂದುಳಿದ ವರ್ಗಗಳ ಮುಖಂಡ ಹೇಮಂತ್ ಆಚಾರ್ಯ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *