Share this news

ಬೆಂಗಳೂರು (ಜೂ.17): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡುವ ಕಾರ್ಯಕ್ಕೆ ಮತ್ತೊಮ್ಮೆ ಭಾರಿ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಕೊಡುವುದಿಲ್ಲವೆಂದು ಹೇಳಿದ ನಂತರ ತೆಲಂಗಾಣದಿಂದ ಅಕ್ಕಿಯನ್ನು ಕೇಳಲಾಗಿತ್ತು. ಆದರೆ, ಈಗ ತೆಲಂಗಾಣದಲ್ಲಿಯೂ ಕರ್ನಾಟಕಕ್ಕೆ ಅಕ್ಕಿ ಪೂರೈಕೆ ಮಾಡುವಷ್ಟು ಅಕ್ಕಿ ದಾಸ್ತಾನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ  ಅವರು., ಹೊರರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ, ತೆಲಂಗಾಣದಿಂದ ಅಕ್ಕಿ ಪೂರೈಕೆ ಮಾಡುವಂತೆ ನಾನೇ ಸ್ವತಃ ಅಲ್ಲಿನ ಮುಖ್ಯಮಂತ್ರಿಯೊಂದಿಗೆ ಮಾತಾಡಿದ್ದೇನೆ. ಆದರೆ, ಅಕ್ಕಿ ಸಿಗುತ್ತಿಲ್ಲವಂತೆ. ಆದ್ದರಿಂದ ಮತ್ತೊಮ್ಮೆ ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮತ್ತೊಮ್ಮೆ ಮಾತುಕರೆ ಮಾಡುವಂತೆ ಸೂಚನೆ ನೀಡಿದ್ದೇನೆ. ಒಟ್ಟಾರೆ ತೆಲಂಗಾಣದಿಂದ ಅಕ್ಕಿ ಇಲ್ಲವೆಂದು ಹೇಳಲಾಗಿದ್ದು, ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಖರೀದಿ ಮಾಡಲು ಪ್ರಯತ್ನ ಮುಂದುವರೆದಿದೆ ಎಂದು ತಿಳಿಸಿದರು. 

 ಛತ್ತೀಸ್‌ಘಡದಿಂದ ಅಕ್ಕಿ ಪೂರೈಕೆ ಮಾಡುವಂತೆ ಕೇಳಿದಾಗ ಅದಕ್ಕೆ ಅಲ್ಲಿನ ಮುಖ್ಯಮಂತ್ರಿ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿಕೊಂಡಿದ್ದರು. ಛತ್ತೀಸ್‌ಘಡದ ಅಕ್ಕಿಗೆ ಸ್ವಲ್ಪ ದರ ಜಾಸ್ತಿಯಾಗುತ್ತಿದೆ. ಜೊತೆಗೆ, ಸಾಗಣೆ ವೆಚ್ಚವೂ ಜಾಸ್ತಿ ಆಗುತ್ತಿದೆ. ಇಂದು ಸಂಜೆ ಮತ್ತೊಮ್ಮೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ಮಾಡಿದ ನಂತರ, ಛತ್ತೀಸ್‌ಘಡದಿಂದ ಅಕ್ಕಿ ಖರೀದಿ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದರು.

ಕಮೀಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡ್ತಿದಾರೆ ಎಂಬ ವಿಜಯೇಂದ್ರ ಆರೋಪ ಮಾಡಿದ್ದಾರೆ. ಆದರೆ, ವಿಜಯೇಂದ್ರನೇ ನಮಗೆ ಅಕ್ಕಿ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು. 

 

Leave a Reply

Your email address will not be published. Required fields are marked *