ವಿಜಯಪುರ :ಐಸಿಸ್ ಉಗ್ರ ಸಂಘಟನೆಯ ಜತೆಗೆ ನಂಟು ಹೊಂದಿರುವುದು ಸಾಬೀತುಪಡಿಸಿದರೆ ತಾನು ಭಾರವನ್ನು ತೊರೆಯುವುದಾಗಿ ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಸವಾಲು ಹಾಕಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ, ಒಂದುವೇಳೆ ಅವರು ಆರೋಪ ಸಾಬೀತುಪಡಿಸಿದ್ದಲ್ಲಿ ನಾನು ಈ ದೇಶವನ್ನೇ ತೊರೆದು ಹೋಗುತ್ತೇನೆ. ಒಂದು ವೇಳೆ, ಅವರು ತಮ್ಮ ಆರೋಪವನ್ನು ಸಾಬೀತು ಮಾಡಲು ವಿಫಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಜಮಾತ್ ಎ ಅಹಲೆ ಸುನ್ನತ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಜಯಪುರದ ಹಜರತ್ ಹಾಶಿಂಪೀರ ದರ್ಗಾದ ಮೌಲ್ವಿ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಸವಾಲು ಹಾಕಿದ್ದಾರೆ.
ಐಸಿಸ್ ಜತೆ ನಂಟಿದೆ ಎಂದು ಯತ್ನಾಳ ಅವರು ಬಿಡುಗಡೆ ಮಾಡಿರುವ ಚಿತ್ರಗಳು ನನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ನಾನೇ ಅಪ್ಲೋಡ್ ಮಾಡಿರುವ ಚಿತ್ರಗಳಾಗಿವೆ. ಸುಮಾರು 12 ವರ್ಷಗಳ ಹಿಂದೆ ನಾನು ಇರಾಖ್ ನ ಬಾಗ್ದಾದ್ ನಗರದ ಅಂತಾರಾಷ್ಟ್ರೀಯ ಪ್ರಸಿದ್ಧ ಸೂಫಿ ಮಹೆಬೂಬ್ ಎಸುಭಾನಿ ಗೌಸ್ ಎ ಆಜಂ ಅವರ ದರ್ಶನಕ್ಕೆ ಹೋದಾಗ ಅಲ್ಲಿನ ದರ್ಗಾದ ಪೀಠಾಧಿಪತಿ ಖಲೀದ್ ಜಿಲಾನಿ ಅವರ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಚಿತ್ರಗಳಾಗಿವೆ. ಮತ್ತೊಂದು ಚಿತ್ರ, ಅವರ ಅಂಗರಕ್ಷಕ ನನ್ನನ್ನು ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಚಿತ್ರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.ಐಸಿಸ್ನಂಥ ಭಯೋತ್ಪಾದಕ ಸಂಘಟನೆ ಜೊತೆ ನನಗೆ ನಂಟಿದೆ ಎಂಬುದರ ಬಗ್ಗೆ ಶಾಸಕರು ಒಂದು ವಾರದೊಳಗೆ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ
