ಕಾರ್ಕಳ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದೆ, ಹೆಣ್ಣು ಮಕ್ಕಳ ಮೇಲೆ ನಿರಂತ ದೌರ್ಜನ್ಯ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಶೆಟ್ಟಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಕಾರ್ಕಳದ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಎಂಬ ಹಿಂದೂ ಯುವತಿಯನ್ನು ಫಯಾಜ್ ಎಂಬಾತ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಗೈದರೂ ಆರೋಪಿಯ ಕುರಿತು ಮೌನ ವಹಿಸಿರುವ ಕಾಂಗ್ರೆಸ್ ಪಕ್ಷದ ನಿಜಬಣ್ಣ ಬಯಲಾಗಿದೆ ಎಂದು ಆರೋಪಿಸಿದರು. ಹಿಂದೂಗಳ ಮೇಲಿನ ದೌರ್ಜನ್ಯಗಳು ನಡೆದಾಗ ಕಾಂಗ್ರೆಸ್ ಸರ್ಕಾರ ಮಕ್ಕಳಾಟಿಕೆ ಎಂದು ಸಮರ್ಥಿಸುತ್ತದೆ, ರಾಜ್ಯದಲ್ಲಿ ದಲಿತರಿಗೆ ಭದ್ರತೆಯಿಲ್ಲ, ದಲಿತ ಶಾಸಕನ ಮನೆ ಸುಟ್ಟ ಪ್ರಕರಣವೇ ಇದಕ್ಕೆ ಸಾಕ್ಷಿ, ಕೇವಲ ಅಲ್ಪಸಂಖ್ಯಾತರನ್ನು ಓಲೈಕೆಗಾಗಿ ದೌರ್ಜನ್ಯ ನಡೆಸುವವರನ್ನು ಸಮರ್ಫನೆ ಮಾಡುತ್ತಿರುವುದು ಖಂಡನೀಯ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರ ಮೇಲೆ ನಡುರಸ್ತೆಯಲ್ಲೇ ಅಟ್ಟಹಾಸ ಮೆರೆಯುವವರ ಮೇಲೆ ಕ್ರಮ ಜರುಗಿಸದೇ ಅವರನ್ನು ರಕ್ಷಿಸಲು ಮುಂದಾಗಿರುವುದು ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ರೇಶ್ಮಾ ಉದಯ ಶೆಟ್ಟಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಲಿನಿ ಶೆಟ್ಟಿ, ಶಶಿಮಣಿ, ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್, ಸುಮತಿ, ಸುಜಾತ, ಸರಸ್ವತಿ, ಪ್ರಮೀಳಾ ದಿನೇಶ್ ಉಪಸ್ಥಿತರಿದ್ದರು.










