ಮಂಗಳೂರು : ಎಂಎಲ್ಸಿ ಐವನ್ ಡಿ’ ಸೋಜರವರ ಹೇಳಿಕೆ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಎಫ್ಐಆರ್ ದಾಖಲಿಸದಿರುವುದು ಮತ್ತು ರಾಜ್ಯಪಾಲರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಬುಧವಾರ ಸಂಜೆ ಬಿ.ಸಿ. ರೋಡಿನಲ್ಲಿ ರಸ್ತೆ ತಡೆಗೈದು ಪ್ರತಿಭಟನೆ ನಡೆಸಲಾಯಿತು.
ಇದಕ್ಕೂ ಮೊದಲು ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ನಾಯಕ ವಿಕಾಸ್ ಪುತ್ತೂರು, ಸಿಎಂ.ಸಿದ್ದರಾಮಯ್ಯ ಅವರಿಗೆ ಬಕೆಟ್ ಹಿಡಿದು ಹಿಂಬಾಗಿಲ ಮೂಲಕ ವಿಧಾನ ಪರಿಪತ್ ಪ್ರವೇಶಿಸಿರುವ ಐವಾನ್ ಡಿಸೋಜಾರಿಗೆ ಜನಪ್ರತಿನಿಧಿಯಾಗಿರುವ ಯೋಗ್ಯತೆ ಇಲ್ಲ. ಜನ ವಿರೋಧಿಯಾಗಿರುವ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ, ಯೋಗ್ಯತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾರವರ ವಿರುದ್ದ ಒಂದು ಗಂಟೆಯೊಳಗೆ ಸೋಮೊಟೋ ಕೇಸು ದಾಖಲಿಸುವ ಪೊಲೀಸರಿಗೆ ಎಂಎಲ್ಸಿ ಐವಾನ್ ಡಿಸೋಜಾರವರ ದೂರು ನೀಡಿದರೂ, ಕೇಸ್ ದಾಖಲಿಸಲು ಇನ್ನು ಸೆಕ್ಷನ್ ಸಿಕ್ಕಿಲ್ಲ. ಪೊಲೀಸ್ ಅಧಿಕಾರಿಗಳ ಈ ನಡೆ ಸಾರ್ವಜನಿಕರಲ್ಲಿ ಅನುಮಾನವನ್ನುಂಟು ಮಾಡಿದೆ ಎಂದ ಅವರು, ಸಿದ್ದರಾಮಯ್ಯ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. ಶೀಘ್ರದಲ್ಲಿಯೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ನೆನಪಿನಲ್ಲಿಡುವಂತೆ ಎಚ್ಚರಿಸಿದರು.
ಬಂಟ್ವಾಳ ಪುರಸಭೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್ಐನ ರಾಜಕೀಯ ಪಕ್ಷವಾಗಿರುವ ಎಸ್ಡಿಪಿಐ ಜೊತೆ ಅನೈತಿಕ ಸಂಬAಧದ ಮೂಲಕ ಕಾಂಗ್ರೆಸ್ ಅಧಿಕಾರ ನಡೆಸುವ ದೌರ್ಭಾಗ್ಯ ಬಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿದ್ದು, ಒಂದೇ ಒಂದು ರೂಪಾಯಿ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗೆಯಾಗುತ್ತಿಲ್ಲ ಎಂದರು.
ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಯುವಮೋರ್ಚಾ ಅಧ್ಯಕ್ಷ ದಿನೇಶ್ ದಂಬೆದಾರ್, ಪಕ್ಷದ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ಬಜರಂಗದಳ ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್, ಶಿವಪ್ರಸಾದ್ ತುಂಬೆ, ಪಕ್ಷದ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಗೋವಿಂದ ಪ್ರಭು, ಸುದರ್ಶನ್ ಬಜ, ಶಿವ ಪ್ರಸಾದ ಶೆಟ್ಟಿ, ಹರಿಪ್ರಸಾದ್ ಭಂಡಾರಿಬೆಟ್ಟು, ದಿನೇಶ್ ಅಮ್ಟೂರು, ಪ್ರಭಾಕರ ಪ್ರಭು, ಸಂಜೀವ ಪೂಜಾರಿ ಪಂಜಿಕಲ್ಲು, ಸರಪಾಡಿ ಅಶೋಕ ಶೆಟ್ಟಿ, ಸಂದೇಶ್ ಶೆಟ್ಟಿ, ರಾಮದಾಸ್ ಬಂಟ್ವಾಳ, ದಿನೇಶ್ ಭಂಡಾರಿ, ಪುರುಷೋತ್ತಮ ಸಾಲಿಯಾನ್, ಜನಾರ್ದನ ಬೊಂಡಾಲ, ರವೀಶ್ ಶಟ್ಟಿ, ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ, ರಶ್ಮಿತ್ ಶೆಟ್ಟಿ, ಕಮಾಲಾಕ್ಷಿ ಪೂಜಾರಿ, ಭಾರತಿ ಶೆಟ್ಟಿ ಮೊದಲಾದವರಿದ್ದರು. ಸಂಪತ್ ಕೋಟ್ಯಾನ್ ಸ್ವಾಗತಿಸಿದರು. ಸುರೇಶ್ ಕೋಟ್ಯಾನ್ ವಂದಿಸಿದರು.
`