
ಕಾರ್ಕಳ,ಆ.11: ಕುಕ್ಕುಂದೂರು ಗ್ರಾಮದ ಪರಪು ಶ್ರೀ ನಾಗಬ್ರಹ್ಮ ದೈವಸ್ಥಾನದ ಭಕ್ತರು ಚಾತುರ್ಮಾಸ ವ್ರತದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಶ್ರೀಪಾದರು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ, ಚಾತುರ್ಮಾಸ್ಯ ವ್ರತದ ಮಹತ್ವವನ್ನು ವಿವರಿಸಿದರು.ಇದೇವೇಳೆ ಮಾತನಾಡಿದ ಅವರು “ಚಾತುರ್ಮಾಸ್ಯವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಾಧನೆಗೆ ವಿಶೇಷವಾದ ಕಾಲ. ಮಳೆಗಾಲದ ಈ ನಾಲ್ಕು ತಿಂಗಳುಗಳಲ್ಲಿ ಸಾಧು-ಸಂತರು ಒಂದೇ ಸ್ಥಳದಲ್ಲಿ ವಾಸ್ತವ್ಯ ಹೂಡಿ ಜಪ, ತಪಸ್ಸು ಹಾಗೂ ಪೂಜೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಭಕ್ತರೂ ಸಹ ತಮ್ಮ ಜೀವನದಲ್ಲಿ ಸಾತ್ವಿಕತೆಯನ್ನು ಹೆಚ್ಚಿಸಿಕೊಂಡು ದೇವರ ಸ್ಮರಣೆ, ವ್ರತ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಪುಣ್ಯಕರ. ಭಗವಂತನ ಸ್ಮರಣೆಯಿಂದ ಮನಸ್ಸಿನ ಶುದ್ಧತೆ, ಆತ್ಮಸಂಯಮ ಮತ್ತು ಸದಾಚಾರ ಬೆಳೆಯುತ್ತದೆ. ಭಕ್ತರು ತಮ್ಮ ಶಕ್ತಿಗನುಸಾರ ದಾನ ಹಾಗೂ ಧಾರ್ಮಿಕ ಸೇವೆಗಳಲ್ಲಿ ತೊಡಗಿಕೊಳ್ಳಬೇಕು” ಎಂದ ಶ್ರೀಗಳು, ನಿಮ್ಮೆಲ್ಲರ ಭೇಟಿ ಸಂತೋಷ ತಂದಿದ್ದು, ಪ್ರತಿವರ್ಷವೂ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಅನುಗ್ರಹ ಪಡೆಯಿರಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಿವರಾಮ ರಾವ್, ರಾಜೇಶ್ ರಾವ್, ವೆಂಕಪ್ಪ ಶೆಟ್ಟಿ, ಸುಭಾಶ್ ಶೆಟ್ಟಿ, ಸದಾಶಿವ ಸೇರಿದಂತೆ ದೈವಸ್ಥಾನದ ಹಲವು ಭಕ್ತಾದಿಗಳು ಉಪಸ್ಥಿತರಿದ್ದರು.




.
.
.
.
.
.
.
.
.
.
.
.
.
.
.
.
.
.
.
.
