ಬೆಂಗಳೂರು : ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿನಿಧಿಸುವ ಎಲ್ಲಾ ಕ್ಷೇತ್ರಗಳಿಗೂ ತಲಾ 50 ಕೋಟಿ ಅನುದಾನ ಬಿಡುಗಡೆ ಕುರಿತಂತೆ ಸಿದ್ದರಾಮಯ್ಯ ಎಲ್ಲಾ ಶಾಸಕರಿಗೆ ಪತ್ರ ಬರೆದಿದ್ದಾರೆ. ಶಾಸಕಾಂಗ ಪಕ್ಷದ ಕಚೇರಿಯಿಂದಲೂ ಶಾಸಕರಿಗೆ ಮಾಹಿತಿ ರವಾನೆಯಾಗಿದೆ.
ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ, ಸೇತುವೆ ಕಾಮಗಾರಿ, ಗ್ರಾಮೀಣ ರಸ್ತೆ, ನಗರದ ಅಭಿವೃದ್ದಿ ಕಾಮಗಾರಿ 37.5 ಕೋಟಿ ಮೀಸಲು ಇಟ್ಟಿದ್ದು, ಇನ್ನು 12.5 ಕೋಟಿ ಅನುದಾನ ಶಾಸಕರ ವಿವೇಚನಾಧಿಕಾರಕ್ಕೆ ಮೀಸಲು ಇಡಲಾಗಿದೆ. ಈ ವಿಚಾರವಾಗಿ ಎರಡು ದಿನಗಳ ಕಾಲ ಶಾಸಕರ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದು ಜುಲೈ 30 ಮತ್ತು 31 ರಂದು ವಿಧಾನಸೌಧದಲ್ಲಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡಲು ಇದೇ ವೇಳೆ ಸೂಚನೆ ನೀಡಿದ್ದಾರೆ. ಶಾಸಕರ ಅಸಮಾಧಾನ ಶಮನ ಮಾಡಲು ತಲಾ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅನುದಾನ ಬಿಡುಗಡೆ ಮಾಡಲಾಗಿದೆ.