
ಕಾರ್ಕಳ,ಜು. 20: ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಮನ್ನಣೆಗೆ ಪಾತ್ರರಾಗಲು ಸಾಧ್ಯವಿಲ್ಲ. ಆದರೆ ಶಿವಪ್ರಸಾದ್ ರಾವ್ ತಾನು ಅಧಿಕಾರಿ ಎನ್ನುವ ಅಹಂ ಇಲ್ಲದೇ ಜನಸಾಮಾನ್ಯರ ಜೊತೆಗಿದ್ದು ಜನಮೆಚ್ಚುಗೆಗೆ ಪಾತ್ರರಾದ ವಿಭಿನ್ನ ವ್ಯಕ್ತಿಯಾಗಿದ್ದರು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ತಾಲೂಕು ಕಚೇರಿ ವತಿಯಿಂದ ಅಗಲಿದ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್ ಅವರಿಗೆ ತಾಲೂಕು ಕಚೇರಿ ಸಿಬ್ಬಂದಿಗಳ ವತಿಯಿಂದ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಶಿವಪ್ರಸಾದ್ ರಾವ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮಾತನಾಡಿ,ಕಂದಾಯ ಇಲಾಖೆಯ ಎಲ್ಲಾ ಮಾಹಿತಿಗಳು ಹಾಗೂ ಸಮಸ್ಯೆಗೆ ಪರಿಹಾರ ಕೂಡ ಶಿವಪ್ರಸಾದ್ ರಾವ್ ಅವರ ಬಳಿ ಇತ್ತು. ಅರ್ಜಿಯ ಹಿಂದೆ ಒಂದು ಕುಟುಂಬವಿದೆ ಅವರ ಬದುಕಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕತೆಯಿಂದ ಮಾನವೀಯತೆಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರಿಗೆ ನ್ಯಾಯ ಒದಗಿಸುತ್ತಿದ್ದ ಅಧಿಕಾರಿಯಾಗಿದ್ದರು. ಕರ್ತವ್ಯವೇ ದೇವರು ಎನ್ನುವಂತೆ ತನ್ನ ಬದುಕು ಸಾಗಿಸಿದ ಮೇರು ವ್ಯಕ್ತಿತ್ವದ ಶಿವಪ್ರಸಾದ್ ರಾವ್ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ತಹಶಿಲ್ದಾರ್ ಪ್ರದೀಪ್ ಕುಮಾರ್ ಮಾತನಾಡಿ, ಶಿವಪ್ರಸಾದ್ ರಾವ್ ಅವರು ತನ್ನ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ವೃತ್ತಿಗೆ ನ್ಯಾಯ ಒದಗಿಸಿದವರು.ಅವರ ಅಗಲುವಿಕೆ ಕೇವಲ ಕಂದಾಯ ಇಲಾಖೆಗೆ ಆಗಿರುವ ನಷ್ಟವಲ್ಲ ಇಡೀ ಸಮಾಜಕ್ಕೆ ಆದ ನಷ್ಟ ಎಂದು ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.

ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್ ಅವರು ಮಾತನಾಡಿ, ಶಿವಪ್ರಸಾದ್ ರಾವ್ ನಿಧನ ಕಂದಾಯ ಇಲಾಖೆಗೆ ಭರಿಸಲಾರದ ನಷ್ಟವಾಗಿದೆ.ಇಲಾಖೆಯ ಕೆಲವನ್ನು ಅತ್ಯಂತ ದಕ್ಷತೆ ಹಾಗೂ ಬದ್ಧತೆಯಿಂದ ನಿರ್ವಹಿಸಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಾರಾಮ ಸೇರ್ವೇಗಾರ್ ಮಾತನಾಡಿ,ಶಿವಪ್ರಸಾದ್ ರಾವ್ ಅವರ ಒಳ್ಳೆಯ ಕೆಲಸ ಅವರ ಕುಟುಂಬಕ್ಕೆ ತಲುಪಬೇಕು ಅವರು ಕೇವಲ ಅವರ ಕುಟುಂಬದ ಸದಸ್ಯರಾಗಿರಲಿಲ್ಲ ಅವರು ನಮ್ಮೆಲ್ಲರ ಕುಟುಂಬದ ಸದಸ್ಯರಾಗಿದ್ದರು ಎಂದರು.

ಕಂದಾಯ ನಿರೀಕ್ಷಕ ರಿಯಾಜ್ ಮಾತನಾಡಿ,ಶಿವಪ್ರಸಾದ್ ರಾವ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರಿ ಸೇವೆಯನ್ನು ತಲುಪಿಸುವ ಬದ್ಧತೆಯನ್ನು ಹೊಂದಿದ್ದರು. ಕಾಯಕವೇ ಕೈಲಾಸ ಎಂಬಂತೆ ಕರ್ತವ್ಯ ನಿಷ್ಠೆ ,ಸೇವಾಮನೋಭಾವನೆಯಿಂದ ಸರ್ಕಾರಿ ಸೇವೆ ಮಾಡಿದವರು. ಜನ ಸೇವೆಯೇ ಜನಾರ್ದನ ಸೇವೆ ಎನ್ನುವಂತೆ ಕರ್ತವ್ಯ ನಿರ್ವಹಿಸಿದ ಶ್ರೇಷ್ಠ ವ್ಯಕ್ತಿಯಾಗಿದ್ದರು ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ, ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಅಜೆಕಾರು ನಾಡಕಚೇರಿ ಉಪ ತಹಶೀಲ್ದಾರ್ ಮಹೇಶ್, ರವಿಚಂದ್ರ ಪಾಟೀಲ್,ಗ್ರಾಮ ಸಹಾಯಕ ಚಂದ್ರಶೇಖರ ಮುಂತಾದವರು ಉಪಸ್ಥಿತರಿದ್ದರು



.
.
.
.
.
.
.
.
.
.
.
.
.
.
.
.
.
.
.
.
