
ಕಾರ್ಕಳ, ಆ.04: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮತ್ತೆ ಚಾಲನೆ ನೀಡಿದ್ದು, ಕರಡು ಅಧಿಸೂಚನೆ ಹೊರಬಂದಿರುವ ಹಿನ್ನೆಲೆಯಲ್ಲಿ ಕಾರ್ಕಳ–ಹೆಬ್ರಿ- ಬೆಳ್ತಂಗಡಿ ಭಾಗದ ಜನರಲ್ಲಿ ಆತಂಕ ಉಂಟಾಗಿದೆ.
ಕರ್ನಾಟಕ ರಾಜ್ಯ ಸರ್ಕಾರದ ವಿರೋಧದ ಮಧ್ಯೆಯೂ ಕೇಂದ್ರ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿದ್ದು ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಪ್ರದೇಶಗಳನ್ನು ಇಎಸ್ ಎ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಮಾಡಲಾಗಿದೆ. ರಾಜ್ಯದ ಒಪ್ಪಿಗೆ ಇಲ್ಲದೇ, ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಕೇಂದ್ರ ಸರ್ಕಾರ ಕರಡು ಪ್ರಸ್ತಾವನೆ ಮಾಡಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪರಿಸರ ಸಂರಕ್ಷಣೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಜನಜೀವನ, ಕೃಷಿ, ಅರಣ್ಯವಾಸಿಗಳ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಇಲ್ಲದ ಕರಡು ಅಧಿಸೂಚನೆಯನ್ನು ವಿರೋಧಿಸುತ್ತೇವೆ. ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಬೆಳಂಜೆ, ನಾಡ್ಪಾಲು, ಕುಚ್ಚೂರು, ಚಾರ, ಹೆಬ್ರಿ, ಕಬ್ಬಿನಾಲೆ, ಅಂಡಾರು, ಶಿರ್ಲಾಲು, ಕೆರ್ವಾಶೆ, ದುರ್ಗಾ, ಮಾಳ, ಈದು, ನೂರಾಳ್ ಬೆಟ್ಟು ಸೇರಿದಂತೆ ಹಲವು ಗ್ರಾಮಗಳು ಇ.ಎಸ್.ಎ ವ್ಯಾಪ್ತಿಗೆ ಬರುತ್ತಿದ್ದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಿಂದ ಈ ಗ್ರಾಮಗಳ ಜನರು ಸಂಕಷ್ಟಕ್ಕೆ ಒಳಗಾಗುವ ಅಪಾಯವಿದೆ.
ಈ ಕರಡು ಅಧಿಸೂಚನೆಯ ಪ್ರಸ್ತಾಪದಿಂದ ಜನವಸತಿ ಪ್ರದೇಶಗಳನ್ನು ಹೊರಗಿಡಬೇಕು. ಈಗಾಗಲೇ ಜನವಸತಿ ಇರುವ ಗ್ರಾಮಗಳು, ಪಟ್ಟಣಗಳು, ರೈತರ ಕೃಷಿಭೂಮಿ, ತೋಟಗಾರಿಕೆ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಿಂದ ಹೊರಗಿಡಬೇಕು.
ಆದಿವಾಸಿಗಳ ಅರಣ್ಯ ಹಕ್ಕುಗಳ ರಕ್ಷಣೆ ಆಗಬೇಕು. ಯುಪಿಎ ಸರ್ಕಾರ ಜಾರಿಗೆ ತಂದಿರುವ ಅರಣ್ಯವಾಸಿಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಇರುವ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗಬಾರದು.
ರೈತರು ಮತ್ತು ತೋಟಗಾರರಿಗೆ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಬೇಕು. ಅಡಿಕೆ, ತೆಂಗು, ರಬ್ಬರ್, ಕಾಳು ಮೆಣಸು ಸೇರಿದಂತೆ ಈಗ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ಸೇರಿಸಬೇಕು. ಮತ್ತು ಈ ಭಾಗದ ಗ್ರಾಮಸಭೆಯ ಒಪ್ಪಿಗೆ ಕಡ್ಡಾಯವಾಗಬೇಕು. ಯಾವುದೇ ಹೊಸ ನಿರ್ಬಂಧ ಅಥವಾ ಯೋಜನೆ ಜಾರಿಗೆ ತರುವ ಮೊದಲು ಸಂಬಂಧಿಸಿದ ಗ್ರಾಮಸಭೆಯ ಅನುಮತಿ ಪಡೆಯುವುದು ಕಡ್ಡಾಯವಾಗಬೇಕು.
ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಈ ಭಾಗದ ಜನರ ಮೇಲೆ ಕಾಳಜಿ ಇದ್ದರೆ ಬಾಧಿತ ಪ್ರದೇಶಗಳ ಸ್ಪಷ್ಟ ನಕ್ಷೆ ಪ್ರಕಟಿಸಬೇಕು. ಯಾವ ಸರ್ವೇ ನಂಬರ್ಗಳು ESA ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಪ್ರಕಟಿಸಬೇಕು. ಗ್ರಾಮಗಳ ಹೆಸರನ್ನು ಮಾತ್ರ ಪ್ರಕಟಿಸುವುದರಿಂದ ಗೊಂದಲ ಉಂಟಾಗುತ್ತದೆ.
ಈ ಸಮಸ್ಯೆ ಕುರಿತು ಸಾರ್ವಜನಿಕ ಆಲಿಕ ಸಭೆ ನಡೆಸಬೇಕು. ಕೇವಲ ಪತ್ರಿಕೆಗಳ ಮೂಲಕ ಆಕ್ಷೇಪಣೆ ಆಹ್ವಾನಿಸುವುದಲ್ಲದೆ ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಆಲಿಕೆ ಸಭೆ ನಡೆಸಿ ಜನರ ಅಭಿಪ್ರಾಯ ದಾಖಲಿಸಬೇಕು. ಪರಿಹಾರ ಮತ್ತು ಅಭಿವೃದ್ಧಿ ಪ್ಯಾಕೇಜ್ ಘೋಷಿಸಬೇಕು. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಮೇಲೆ ನಿರ್ಬಂಧ ಹೇರಬೇಕಾದರೆ, ಅವರಿಗೆ ಸೂಕ್ತ ಪರಿಹಾರ, ಮೂಲಸೌಕರ್ಯ ಮತ್ತು ಪರ್ಯಾಯ ಜೀವನೋಪಾಯದ ಪ್ಯಾಕೇಜ್ ಘೋಷಿಸಬೇಕು.
ಈ ಕರಡು ಪ್ರಸ್ತಾವನೆಗೆ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಯಾವ ಗ್ರಾಮಗಳಲ್ಲೂ ಸರ್ವೆ ಕಾರ್ಯ ನಡೆಸಿಲ್ಲ. ಕೇವಲ ಉಪಗ್ರಹ ಚಿತ್ರಗಳ ಆಧಾರದಲ್ಲಿ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಬರಕೂಡದು. ಅದರ ಬದಲು ಸ್ಥಳ ಪರಿಶೀಲನೆ ನಡೆಸಿ, ಜನವಸತಿ ಪ್ರದೇಶಗಳನ್ನು ESA ಪಟ್ಟಿಯಿಂದ ಕೈಬಿಡಬೇಕು. ಈ ನಿಟ್ಟಿನಲ್ಲಿ ಈ ಭಾಗದಿಂದ ಆಯ್ಕೆಯಾಗಿರುವ ಸಂಸದರು, ಶಾಸಕರು ಕೇಂದ್ರ ಸರ್ಕಾರವನ್ನು ಎಚ್ವರಿಸುವ ಕೆಲಸವನ್ನು ಮಾಡಬೇಕು ಎಂದು ಮುನಿಯಾಲು ಉದಯ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
