ಬೆಂಗಳೂರು: ಆಹಾರ ಮತ್ತು ಸುರಕ್ಷತೆ ಇಲಾಖೆಯ ಗುಣಮಟ್ಟ ಸಮರ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧದಿಂದ ತೊಡಗಿ ಪಾನಿಪುರಿ ತನಕ ಬಂದು ನಿಂತಿದೆ. “ಈಟ್ ರೈಟ್” ಎಂಬ ಅಭಿಯಾನ ಆರಂಭಿಸಿರುವ ಆಹಾರ ಮತ್ತು ಸುರಕ್ಷತಾ ಇಲಾಖೆ, ರಾಜ್ಯದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಕಾಟನ್ ಕ್ಯಾಂಡಿಯಲ್ಲಿ ಬಳಸುವ ಕೃತಕ ಬಣ್ಣದಲ್ಲಿ ಇರುವ ರೋಡಮೈನ್ ಬಿ ಅಂಶ ಕ್ಯಾನ್ಸರ್ ಕಾರಕ ಎಂದು ತಿಳಿದು, ಬಣ್ಣ ಬಳಕೆಗೆ ಕಡಿವಾಣ ಹಾಕಲಾಯಿತು. ನಂತರ ಗೋಬಿ ಮಂಚೂರಿ, ಕಬಾಬ್ ಗೆ ಕೃತಕ ಬಣ್ಣ ಬಳಸಿದರೆ, 10 ಲಕ್ಷ ರೂ. ದಂಡ ವಿಧಿಸುವ ಆದೇಶವೂ ಹೊರಬಿತ್ತು. ಪಾನಿಪುರಿಗೆ ಬಳಸುವ ಪಾನಿ ಕೂಡ ಸುರಕ್ಷಿತವಲ್ಲ ಎಂಬುದು ಲ್ಯಾಬ್ ಟೆಸ್ಟ್ ವರದಿಯಲ್ಲಿ ತಿಳಿಯಿತು. ಇದೀಗ ಆಹಾರ ಮತ್ತು ಸುರಕ್ಷತಾ ಇಲಾಖೆ ಉಪ್ಪಿನ ಪರೀಕ್ಷೆಗೆ ಇಳಿದಿದ್ದು,2,300 ಮಾದರಿಗಳ ಪರೀಕ್ಷೆಯಿಂದ ಉಪ್ಪು ಕೂಡ ಕಳಪೆ ಎಂಬ ವಿಚಾರ ಬಯಲಾಗಿದೆ.
ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಉಪ್ಪಿನ ಮಾದರಿಗಳನ್ನು ಸಂಗ್ರಹಿಸಲು ಮುಂದಾದ ಆಹಾರ ಮತ್ತು ಸುರಕ್ಷತಾ ಇಲಾಖೆಗೆ, ಉಪ್ಪಿನಲ್ಲಿ ಅಯೋಡಿನ್ ಕೊರತೆ ಇರುವುದು ಲ್ಯಾಬ್ ಟೆಸ್ಟ್ ಗಳಲ್ಲಿ ಪತ್ತೆಯಾಗಿದೆ. ಅಷ್ಟೆ ಅಲ್ಲ, ಈ ಉಪ್ಪಿನಲ್ಲಿ ಸೀಮೆಸುಣ್ಣ, ಸಿಂಥೆಟಿಕ್ ಪೊಟ್ಯಾಸಿಯಮ್ ಕ್ಲೋರೈಡ್ನಂತಹ ರಾಸಾಯನಿಕಗಳ ಅಂಶ ಇರುವುದು ತಿಳಿದು ಬಂದಿದೆ. ಅಯೋಡಿನ್ ಮಾನವ ದೇಹಕ್ಕೆ ಅತ್ಯಂತ ಮುಖ್ಯವಾದ ಖನಿಜವಾಗಿದೆ. ಅದರ ಕೊರತೆಯು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಅಯೋಡಿನ್ ಪ್ರಮಾಣವು ಕಡಿಮೆಯಾಗಿ ಅನೇಕ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯವಂತ ಮಕ್ಕಳು ಅನಾರೋಗಕ್ಕೀಡಾಗಬಹುದು. ಇದೀಗ ಉಪ್ಪಿನಲ್ಲಿ ಅಯೋಡಿನ್ ಕೊರತೆ, ಇತರ ರಾಸಾಯನಿಗಳು ಇರುವುದು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದೆ.