ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪ್ರಮುಖವಾಗಿ ಕಟ್ಟಡ ಕಲ್ಲು, ಮೈನಿಂಗ್ ಸ್ಟೋನ್ ರಾಯಲ್ಟಿ ಹೆಚ್ಚಿಸಲಾಗಿದೆ. ಆ ಮೂಲಕ ಹೊಸ ಕಟ್ಟಡ ಕಟ್ಟುವವರ ಕನಸು ದುಬಾರಿಯಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದ ಬಗ್ಗೆ ಚರ್ಚೆಯಾಗಿದೆ. ರಾಯಲ್ಟಿ ಪರಿಷ್ಕರಣೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ. ಸರ್ಕಾರದ ಆದಾಯ ಹೆಚ್ಚಳಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಗ್ಯಾರೆಂಟಿಗಳಿಗೇನು ಹಣದ ಕೊರತೆಯಿಲ್ಲ ಆದರೆ ಅಭಿವೃದ್ಧಿ ಕಾರ್ಯಗಳಿಗೆ ಬೇಕಾಗುವ ಆದಾಯಕ್ಕಾಗಿ ರಾಯಲ್ಟಿ, ತೆರಿಗೆ ಹಾಕಲಾಗಿದೆ ಎಂದಿದ್ದಾರೆ.
ಪ್ರತಿ ಮೆಟ್ರಿಕ್ ಕಲ್ಲಿಗೆ 10 ರೂ. ರಾಯಲ್ಟಿ ಹೆಚ್ಚಿಸಲಾಗಿದೆ. ರಾಯಲ್ಟಿ ಪಾವತಿಸದೆ ಖನಿಜ ಸಾಗಣೆ ಮಾಡಿದರೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ. 6,105 ರೂಪಾಯಿ ದಂಡ ವಿಧಿಸಲಾಗಿತ್ತು. ಕಳೆದ 6-7 ವರ್ಷಗಳಿಂದ ದಂಡ ವಸೂಲಿಯಾಗಿಲ್ಲ, ಬಾಕಿಯಿದೆ. ಹಾಗಾಗಿ ಒನ್ ಟೈಮ್ ಸೆಟ್ಲ್ ಮೆಂಟ್ ಗೆ ಅವಕಾಶ ನೀಡಲಾಗಿದೆ. ಗಣಿಗಾರಿಕೆ ನಡೆಸುವವರು ಕಳೆದ ಐದು ವರ್ಷಗಳಿಂದ ದಂಡ ಕಟ್ಟಿಲ್ಲ. ಅದನ್ನ ವಸೂಲಿ ಮಾಡಲು ಈ ತೀರ್ಮಾನ ಮಾಡಲಾಗಿದೆ. ಡಿಜಿಟಲ್ ಮಾಡಿದ ಮೇಲೆ ಎನ್ ಕ್ರೋಚ್ ಸಾಧ್ಯವಾಗುತ್ತಿಲ್ಲ. ಒಟಿಎಸ್ ಮೂಲಕ ದಂಡ ವಸೂಲಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು