ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಕರಣವು ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಮುಡಾದಲ್ಲಿ ಸೈಟ್ ಕ್ರಯ ಆಗುವ ಮುನ್ನವೇ ಅಗ್ರಿಮೆಂಟ್ ಸೇಲ್ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಂದು ಆರೋಪ ಕೇಳಿ ಬಂದಿದ್ದು, ಕೋಟ್ಯಾಂತರ ರೂಪಾಯಿಗೆ ಬೆಲೆಬಾಳುವ ಸೈಟ್ಗಳನ್ನು ಕೇವಲ 3 ಸಾವಿರಕ್ಕೆ ಮಾರಾಟ ಮಾಡಿದ್ದು ಇದರಿಂದ ಸರ್ಕಾರಕ್ಕೆ 300 ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಮುಡಾ ಮಾಜಿ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕ ಬಡಾವಣೆಯ ಮಂಜುನಾಥ್ ನಿಂದ ಮಹಾ ಭೂಗಳ್ಳತನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದ ಮುಡಾ ಮಾಜಿ ಆಯುಕ್ತ ದಿನೇಶ್ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಗೆ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಐದೇ ದಿನಗಳಲ್ಲಿ ಒಂದು ನಿವೇಶನಕ್ಕೆ 3 ಸಾವಿರ ರೂಪಾಯಿಯಂತೆ 23 ಸೈಟ್ ಗಳನ್ನು ನೀಡಲಾಗಿದೆ. ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಭೂಮಿ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ, ಪ್ರೋತ್ಸಾಹದಾಯಕ ಎಂದು ನಮೂದಿಸಿ ನಿವೇಶನಗಳನ್ನು ನೀಡಲಾಗಿದೆ. 5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿ ಮಾಡಿಸಿಕೊಂಡು ನಿವೇಶನ ನೀಡಲಾಗಿದೆ.
ಮುಡಾ ಭ್ರಷ್ಟಾಚಾರದ ಬಗ್ಗೆ ಒಂದು ವರ್ಷದ ಹಿಂದೆಯೇ ಕೃಷ್ಣ ಎಂಬವರು ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿ.ಟಿ.ದಿನೇಶ್ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಶ್ರೀಮತಿ.ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಿಸಿದ್ದರು.