Share this news

ಕಾರ್ಕಳ: ಶಿಕ್ಷಣದಿಂದ ಮಾತ್ರ ಸುಶಿಕ್ಷಿತ ಹಾಗೂ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರ್ಕಾರಿ ಶಾಲೆಗಳು ಇಂದಿಗೂ ಹಿಂದೆಬಿದ್ದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡುವ ಅಮ್ಮನ ನೆರವು ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಬೈಲೂರು ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜೂನ್ 26ರಂದು ನಡೆದ ‘ಅಮ್ಮನ ನೆರವು ಟ್ರಸ್ಟ್(ರಿ)’ ಸಂಸ್ಥೆಯಿಂದ ಬೈಲೂರು ಮತ್ತು ಸುತ್ತಮುತ್ತಲ ಶಾಲೆಗಳ ಪ್ರತಿಭಾನ್ವಿತ ಪಿಯುಸಿ ಹಾಗೂ ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರ ಕಾಂತಿಯಿಂದ ಸಮಗ್ರ ಸಮಾಜದ ಅಭಿವೃದ್ಧಿ ಆಗುತ್ತದೆ. ಅಮ್ಮನ ನೆರವು ಟ್ರಸ್ಟ್ ಸರಕಾರಿ ಶಾಲೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದರು. ಟ್ರಸ್ಟನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿಯವರಂತಹ ಯುವಕರು ಈ ಟ್ರಸ್ಟ್ ಸ್ಥಾಪನೆ ಮಾಡಿದ್ದು ತಾಲೂಕಿನಾದ್ಯಂತ ನೂರಾರು ವಿದ್ಯಾರ್ಥಿಗಳಿಗೆ ಅಂದಾಜು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ತಾಲೂಕಿನ 7 ಕೇಂದ್ರಗಳಲ್ಲಿ ಈ ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮಗಳು ನಡೆಯಲಿದ್ದು ಅದರ ಮೊದಲ ಹಂತದ ಕಾರ್ಯಕ್ರಮವು ಬೈಲೂರು ಜೂನಿಯರ್ ಕಾಲೇಜಿನಲ್ಲಿ ನಡೆದಿದೆ. ಒಟ್ಟು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ಈ ವರ್ಷ ವಿತರಣೆ ಆಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ಅವರು ಹೇಳಿದರು.

ಬೈಲೂರಿನಲ್ಲಿ 13 ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 10,000 ರೂ, 32 SSLC ವಿದ್ಯಾರ್ಥಿಗಳಿಗೆ ತಲಾ 5,000 ರೂ. ಮತ್ತು ಒಂದು ಶಾಲೆಗೆ 10,000 ನೆರವು ಈ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ಮಾತನಾಡಿ, ಅಮ್ಮನ ನೆರವು ಟ್ರಸ್ಟಿನಿಂದ ಪಡೆದ ವಿದ್ಯಾರ್ಥಿವೇತನದ ಹಿಂದೆ ಶ್ರಮದ ಬೆವರಿದೆ. ಆದ್ದರಿಂದ ಅದನ್ನು ಸದುಪಯೋಗಪಡಿಸಿಕೊಂಡು ಮುಂದೆ ತಾವು ಕೂಡ ಇನ್ನೊಬ್ಬರಿಗೆ ನೆರವಾಗಬೇಕೆಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಚಂದ್ರಶೇಖರ್ ಶೆಟ್ಟಿ (ದಾಮಣ್ಣ), ಬೈಲೂರು ಕೃಷ್ಣರಾಜ್ ಹೆಗ್ಡೆ, ಸುಮಿತ್ ಶೆಟ್ಟಿ ಬೈಲೂರು, ಲಯನ್ಸ್ ಅಧ್ಯಕ್ಷ ಗುತ್ತುಮನೆ ಪ್ರಶಾಂತ್ ಶೆಟ್ಟಿ, ಕ ಗುತ್ತಿಗೆದಾರ ಪ್ರಸನ್ನ ಶೆಟ್ಟಿ ಬೈಲೂರು, ಉದ್ಯಮಿ ಜಯಪ್ರಕಾಶ್ ಶೆಟ್ಟಿ ಪೂನಾ, SDMC ಅಧ್ಯಕ್ಷ ಸ್ಟೀವನ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ್, ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಿವೃತ್ತ ಶಿಕ್ಷಕ ರಾಜೇಂದ್ರ ಭಟ್ ಕೆ. ಸ್ವಾಗತಿಸಿ ನಿರೂಪಿಸಿದರು. ನಿವೃತ್ತ ಶಿಕ್ಷಕ ವಸಂತ ಎಂ ವಂದಿಸಿದರು.

 

 

Leave a Reply

Your email address will not be published. Required fields are marked *