ಕಾರ್ಕಳ: ಹಸುವನ್ನು ಗೋಮಾತೆ ಎಂದು ಪೂಜಿಸುವುದಕ್ಕೆ ಮಾತ್ರ ಗೊತ್ತಿರುವ ಬಿಜೆಪಿಗರಿಗೆ ಹೈನುಗಾರರ ಕಷ್ಟವನ್ನು ಅರಿಯಲು ಸಾಧ್ಯವಿಲ್ಲ,ಆದ್ದರಿಂದ ಹಾಲಿನ ಬೆಲೆ ಹೆಚ್ಚಳವನ್ನು ವಿರೋಧಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್’ಚಂದ್ರ ಪಾಲ್ ನಕ್ರೆ ಟೀಕಿಸಿದ್ದಾರೆ.
ರಾಜ್ಯದ ರೈತರು ಹಾಗೂ ಹೈನುಗಾರರ ಬೇಡಿಕೆಯಂತೆ ಹೈನುಗಾರಿಕೆಯನ್ನು ಲಾಭದಾಯಕವನ್ನಾಗಿಸುವ ಗುರಿಯೊಂದಿಗೆ ಬೆಲೆ ಏರಿಕೆ ಮಾಡಲಾಗಿದೆಯೇ ಹೊರತು ಇದರಲ್ಲಿ ರಾಜ್ಯ ಸರಕಾರಕ್ಕೆ ಯಾವುದೇ ಲಾಭದ ಪಾಲಿಲ್ಲ. ಹೆಚ್ಚುವರಿ ಹಣ ನೇರವಾಗಿ ಹಾಲು ಉತ್ಪಾದಕರ ಖಾತೆಗೆ ಜಮೆಯಾಗುತ್ತದೆ ಎನ್ನುವ ವಿಚಾರ ಪ್ರತಿಭಟನಾಗಾರರಿಗೆ ತಿಳಿದಿಲ್ಲ. ಈ ಬಗ್ಗೆ ಕೆಎಂಎಫ್ ರಾಜ್ಯದ ಜನತೆಗೆ ನೈಜ ಮಾಹಿತಿ ನೀಡುವಲ್ಲಿ ಎಡವಿದೆ. ರಾಜ್ಯದಲ್ಲಿ ಪ್ರತೀ ಲೀಟರಿಗೆ 4 ರೂ. ಹೆಚ್ಚಳವಾದರೂ,ಅತೀ ಕಡಿಮೆ ದರದಲ್ಲಿ ಹಾಲು ಸರಬರಾಜು ಆಗುವುದೇ ಕರ್ನಾಟಕದಲ್ಲಿ ಎನ್ನುವುದು ಉಲ್ಲೇಖನೀಯ.
ಪ್ರಸಕ್ತ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯ. ಪಶು ಸಾಕಣೆಗೆ ಪೂರಕವಾದ ಪಶು ಆಹಾರ, ಹುಲ್ಲು, ಕೂಲಿ ಇತರೆ ವಸ್ತುಗಳ ಬೆಲೆ ಏರಿಕೆ, ವಾತಾವರಣ ವೈಪರೀತ್ಯದ ಕಾಯಿಲೆಗಳು, ಹಸುಗಳ ಬಂಜೆತನ ಮೊದಲಾದ ಹತ್ತು ಹಲವು ಕಾರಣಗಳಿಂದ ಹೈನುಗಾರಿಕೆ ಲಾಭದಾಯಕವಾಗಿ ಉಳಿದಿಲ್ಲ. ಇದನ್ನು ಲಾಭದಾಯಕ ಗೊಳಿಸುವುದು ಜನಪರ ಸರಕಾರದ ಕರ್ತವ್ಯ. ಇದು ಗೊತ್ತಿದ್ದೂ ಇದನ್ನು ಪ್ರತಿಭಟಿಸುವ ಹಿಂದೆ ಬಿಜೆಪಿಗೆ ಅದರದ್ದೇ ಆದ ರಾಜಕೀಯ ಕಾರ್ಯಸೂಚಿ ಅಡಗಿದೆ. ಕಳೆದ ಬಾರಿ ನಷ್ಟದಲ್ಲಿರುವ ಗುಜರಾತ್ ಮೂಲದ ಅಮುಲ್ ಸಂಸ್ಥೆಯೊಂದಿಗೆ ಕೆಎಂಎಫ್ ನ್ನು ವಿಲೀನಗೊಳಿಸುವ ವ್ಯವಸ್ಥಿತ ಹುನ್ನಾರದಲ್ಲಿ ಸೋತಿದ್ದ ಬಿಜೆಪಿ ಇದೀಗ ಬೆಲೆ ಏರಿಕೆಯನ್ನು ಅಸ್ತ್ರವಾಗಿ ಬಳಸಿ ರಾಜಕೀಯ ಮಾಡುತ್ತಿದೆ ಎಂದು ಬಿಪಿನ್’ಚಂದ್ರ ಪಾಲ್ ನಕ್ರೆ ಆರೋಪಿಸಿದ್ದಾರೆ
K