ಉಡುಪಿ :ರಾಜ್ಯ ಸರಕಾರ ಕಲ್ಲು ಗಣಿಗಾರಿಕೆ ಪರವಾನಿಗೆ ನವೀಕರಣ ಹಾಗೂ ಹೊಸ ಪರ್ಮಿಟ್ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ನಿರ್ಮಾಣ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದು, ಸರ್ಕಾರವು ಬಡವರ ಹಾಗೂ ಶ್ರಮಿಕ ವರ್ಗದ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಜಲ್ಲಿ, ಶಿಲೆಕಲ್ಲು, ಕೆತ್ತನೆ ಕಲ್ಲು, ಕೆಂಪು ಕಲ್ಲು, ಮರಳು ಸಹಿತ ಎಲ್ಲಾ ವಿಧದ ಗಣಿ ಉತ್ಪಾದಕ ಸಾಮಗ್ರಿಗಳು ಸಿಗದೇ ನಿರ್ಮಾಣ ವಲಯದಲ್ಲಿ ಭಾರಿ ಏರುಪೇರಾಗಿದೆ. ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ಪೊಲೀಸರು ಕೊಲೆಗಡುಕರು, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಕೈಗೆ ಕೋಳ ಹಾಕುವ ಬದಲು ನಿರ್ಮಾಣ ವಲಯದ ಕುಶಲ ಕಾರ್ಮಿಕರನ್ನು ಠಾಣೆಯಲ್ಲಿ ಕುಳ್ಳಿರಿಸಿಕೊಳ್ಳತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರವಾನಗಿ ನೆಪದಲ್ಲಿ ಕಾರ್ಮಿಕರ ಲಾರಿ, ಟಿಪ್ಪರ್ , ಪಿಕಪ್ ಇನ್ನಿತರ ವಾಹನ, ಕತ್ತಿ, ಪಿಕ್ಕಾಸು, ಸುತ್ತಿಗೆಗಳನ್ನು ವಶ ಪಡಿಸಿಕೊಂಡು ದುಡಿಯದಂತೆ ಮಾಡಿ ಅನ್ನ ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಪೊಲೀಸರ ಮೂಲಕ ಮಾಡಿಸುತ್ತಿದೆ ಎಂದು ಸುನಿಲ್ ಆರೋಪಿಸಿದ್ದಾರೆ.
ಮಟ್ಕಾ, ಜುಗಾರಿ ಇತ್ಯಾದಿ ಕಾನೂನು ಬಾಹಿರ ಕೃತ್ಯ ನಡೆಸುವವರು ಸಾರ್ವಜನಿಕವಾಗಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.ಆದರೆ ಶ್ರಮಿಕ ವರ್ಗವನ್ನು ಸಲ್ಲದ ನೆಪವೊಡ್ಡಿ ಠಾಣೆಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿದ್ದರಿಂದ ಸಾವಿರಾರು ಕಾರ್ಮಿಕರ ಹೊಟ್ಟೆಗೆ ಕಲ್ಲು ಬಿದ್ದಿದೆ. ಕಟ್ಟಡ ನಿರ್ಮಾಣ ಮತ್ತು ಮಳೆಗಾಲದ ತುರ್ತು ದುರಸ್ತಿಗೆ ರಸ್ತೆ ಕಾಮಗಾರಿ ಶಾಖೆಗಳಲ್ಲಿ ನಿರ್ಮಾಣ ಸಾಮಗ್ರಿ ಕೊರತೆ ಉಂಟಾಗಿದೆ. ಜನಸಾಮಾನ್ಯರಿಗೆ ಮನೆ ರಿಪೇರಿ ಇತರೆ ಚಟುವಟಿಕೆ ಸಾಧ್ಯವಾಗುತಿಲ್ಲ. ಸ್ಥಳಿಯ ಆರ್ಥಿಕತೆಯೂ ಕುಂಠಿತವಾಗಿದೆ. ರಾಜ್ಯ ಸರಕಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು. ಜೀವನ ಸಾಗಿಸಲು ಪರದಾಡುವ ಸ್ಣಿತಿಯಿದೆ. ಶಾಲೆಗಳು ಪುನಾರರಂಭ ಹೊತ್ತಿನಲ್ಲಿದ್ದು, ಫೀಸ್ ಕಟ್ಟಲು ಹಣ ಹೊಂದಿಸಲು ಸಾದ್ಯವಿಲ್ಲದೇ ಕಾರ್ಮಿಕರು ಪರದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಉಡುಪಿ ಜಿಲ್ಲೆ ಉಸ್ತುವಾರಿ ಸಚಿವರು ಈಗ ಅಪರೂಪದ ಅತಿಥಿಗಳಾಗಿದ್ದಾರೆ. ಕಾಟಾಚಾರಕ್ಕೆ ಉಸ್ತುವಾರಿ ಕೆಲಸ ಮಾಡುತ್ತಿದ್ದಾರೆ. ಯಾವ ಸಮಸ್ಯೆಗಳಿಗೂ ಅವರಿಂದ ಪರಿಹಾರ ದೊರೆತಿಲ್ಲ ಎಂದು ಟೀಕಿಸಿದ್ದಾರೆ.
ಗಣಿಗಾರಿಕೆ, ಪರವಾನಿಗೆ ನವೀಕರಣ ಸಂಬಂಧ ಈ ಹಿಂದೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದೆ. ಸರ್ವಾಂಗ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಸುನಿಲ್ ಕುಮಾರ್ ಟೀಕಿಸಿದ್ದಾರೆ.