ಕಾರ್ಕಳ: ವಾಸಕ್ಕೆ ಸ್ವಂತ ಸೂರಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕೂಡುಬೆಟ್ಟು ಸರಸ್ವತಿ ಹೆಗ್ಡೆ ಅವರಿಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಹಾಗೂ ದ..ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ನೆರವಿನಿಂದ ನಿರ್ಮಾಣಗೊಂಡ ನೂತನ ಮನೆಯನ್ನು ಗುರುವಾರ ಹಸ್ತಾಂತರಿಸಲಾಯಿತು.
ತೀರಾ ಬಡ ಕುಟುಂಬದ ಸರಸ್ವತಿ ಹೆಗ್ಡೆಯವರಿಗೆ
ನೀಲಾಂಬಿಕೆ, ನೀಲೇಶ್ವರಿ ಎಂಬಿಬ್ಬರು ಅವಳಿ ಜವಳಿ ಹೆಣ್ಣುಮಮಕ್ಕಳು ಹಾಗೂ ನೀಲಕಂಠ ಗಂಡು ಮಗ ಇದ್ದಾರೆ. ಜೀವನ ನಿರ್ವಹಣೆಗಾಗಿ ಮಾಳ ಪಂಚಾಯತಿನಲ್ಲಿ ಸ್ವಚ್ಚತಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು ಸಿಗುವ ಅಲ್ಪ ಸ್ವಲ್ಪ ಸಂಪಾದನೆಯಿಂದ ಮನೆಯ ಖರ್ಚು ಹಾಗೂ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನೋಡಿಕೊಳ್ಳಬೇಕಾಗಿತ್ತು. ಇವತ್ತು ನಾಳೆ ಎನ್ನುವಂತೆ ಬೀಳುವ ಸ್ಥಿತಿಯಲ್ಲಿದ್ದ ಸಣ್ಣ ಮನೆಯೊಂದರಲ್ಲಿ ಈ ಕುಟುಂಬ ವಾಸವಿದ್ದು ಸ್ವಂತ ಮನೆ ಎಂಬುದು ಅವರ ಪಾಲಿಗೆ ಕನಸಿನ ಮಾತಾಗಿತ್ತು.
ಈ ಕುಟುಂಬದ ಸಂಕಷ್ಟವನ್ನು ಅರಿತ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಜಿಲ್ಲಾ ಹೆಗ್ಗಡೆ ಸಮಾಜ ಸಂಘವು ಸಮಾಜದ ವಿವಿಧ ದಾನಿಗಳ ಸಹಕಾರದೊಂದಿಗೆ ಸುಮಾರು ರೂ. 7 ಲಕ್ಷ ವೆಚ್ಚದಲ್ಲಿ ಕೂಡುಬೆಟ್ಟುನಲ್ಲಿ ಹೊಸ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ನೂತನ ಮನೆ `ಶ್ರೀ ವೀರಮಾರುತಿ ಪ್ರಸಾದ’ಇದರ ಗೃಹಪ್ರವೇಶ ಗುರುವಾರ ನಡೆಯಿತು. ಅರ್ಚಕ ಶಿವಪ್ರಸಾದ್ ಭಟ್ ಅವರು ಪೂಜಾ ಕೈಂಕರ್ಯವನ್ನು ನೆರವೇರಿಸಿಕೊಟ್ಟರು.
ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ, ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ ಮನೆ ಮಾಲಕಿ ಸರಸ್ವತಿ ಹೆಗ್ಡೆ ಅವರಿಗೆ ಮನೆಯ ಬಾಗಿಲಿನ ಕೀಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು.
ದೇವಸ್ಥಾನದ ಕಾರ್ಯದರ್ಶಿ ಶಂಕರ್ ಹೆಗ್ಡೆ, ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ, ದಾನಿಗಳಾದ ಮಾಳ ಆನಂದ ಹೆಗ್ಡೆ, ಸಂದೀಪ್ ಹೆಗ್ಡೆ, ಪ್ರಶಾಂತ್ ಹೆಗ್ಡೆ, ಪ್ರಸನ್ನ ಹೆಗ್ಡೆ ಕರಂಬಾರುಗುತ್ತು, ಸ್ಥಳ ದಾನ ಮಾಡಿದ ವಸಂತ ಹೆಗ್ಡೆ, ಪ್ರಶಾಂತ್ ಹೆಗ್ಡೆ, ಮಾಳ ಶಾರದಾ ಹೆಗ್ಡೆ, ಶಾಂತಾ ಹೆಗ್ಡೆ, ಜಯರಾಮ ಹೆಗ್ಡೆ, ಹೆಪ್ಪಳ ಪ್ರಭಾಕರ ಹೆಗ್ಡೆ, ನಿವೃತ್ತ ಶಿಕ್ಷಕರಾದ ದಿವಾಕರ ಹೆಗ್ಡೆ, ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು, ಹೆಗ್ಗಡೆ ಸಂಘ ಹೆಬ್ರಿ ವಲಯ ಅಧ್ಯಕ್ಷ ಪ್ರವೀಣ್ ಹೆಗ್ಡೆ, ನಾರಾವಿ ವಲಯ ಅಧ್ಯಕ್ಷ ಸದಾನಂದ ಹೆಗ್ಡೆ, ಹೆಗ್ಗಡೆ ಯುವ ಘಟಕದ ಅಧ್ಯಕ್ಷ ಸೃಜನ್ ಹೆಗ್ಡೆ, ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಕಾರ್ಯದರ್ಶಿ ಲತಾ ಯು. ಹೆಗ್ಡೆ, ಮೂಡುಬಿದಿರೆ ವಲಯ ಕಾರ್ಯದರ್ಶಿ ಮಮತ ಆರ್.ಹೆಗ್ಡೆ, ಕಾರ್ಕಳ ವಲಯ ಕಾರ್ಯದರ್ಶಿ ವಿಜಯ ಯು. ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು. ಪ್ರಣಿಲ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.