ಕಾರ್ಕಳ: ಕಳೆದ ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪ್ರಶಾಂತ ಕಾಮತ್ ರವರ ಮನೆಯ ಮುಂಭಾಗದ ಸರ್ವಿಸ್ ರಸ್ತೆ ಬದಿಯ ಮಣ್ಣು ಕುಸಿದು ಬೃಹದಾಕಾರದ ಹೊಂಡವಾಗಿದ್ದು ಅಪಾಯ ಬಾಯ್ದೆರೆದು ಕಾಯುತ್ತಿದೆ. ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿಯವರಿಗೆ ತಿಳಿಸಿದರೂ ಕೇವಲ ಒಂದೆರಡು ಬಾರಿ ರಸ್ತೆ ಬದಿಗೆ ಕೆಂಪು ಮಣ್ಣು ಸುರಿದಿದ್ದು, ಇದರಿಂತ ಮತ್ತಷ್ಟು ಅವಾಂತರಗಳಾಗಿವೆ. ಗುತ್ತಿಗೆದಾರ ಕಂಪನಿಯವರ ಬೇಜವಾಬ್ದಾರಿತನದಿಂದಾಗಿ ಪ್ರಾಣಪಾಯವೇನಾದರೂ ಸಂಭವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿಯೇ ನೇರ ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.
ರಸ್ತೆ ಬದಿಗೆ ಸುರಿದ ಮಣ್ಣು ಮಳೆ ನೀರಿನೊಂದಿಗೆ ಬೆರೆತು ಜಾರುತ್ತಿದ್ದು, ಈಗಾಗಲೇ ಹಲವಾರು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಮಣ್ಣು ಕುಸಿದಿರುವ ಪಕ್ಕದಲ್ಲಿಯೇ ಎರಡು ಹೋಟೆಲ್ ಗಳಿದ್ದು, ಲಾರಿ ಕಾರು ಇನ್ನಿತರ ವಾಹನಗಳು ಊಟಕ್ಕೆಂದು ವಾಹನಗಳನ್ನು ರಸ್ತೆ ಬದಿಗೆ ಪಾರ್ಕ್ ಮಾಡುವಾಗ ಮಣ್ಣು ಕುಸಿದು ವಾಹನಗಳು ಪಲ್ಟಿಯಾಗಿ 10 ಅಡಿ ಗಾತ್ರದಲ್ಲಿ ಕೆಳಗೆ ಬೀಳುವ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಂಡಿದೆ.
ಸರ್ವಿಸ್ ರಸ್ತೆ ಬದಿಯಲ್ಲಿ ಕುಸಿದಿರುವ ಭಾಗಕ್ಕೆ ಕಲ್ಲು ಅಥವಾ ಕಾಂಕ್ರೀಟ್ ನ ತಡೆಗೋಡೆ ನಿರ್ಮಾಣವಾದರೆ ಮಾತ್ರ ಶಾಶ್ವತ ಪರಿಹಾರ ಸಿಗಬಹುದು ಎಂದು ಅವರು ತಿಳಿಸಿದ್ದಾರೆ.