ಬೆಂಗಳೂರು: ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಚಿವ ಜಮೀರ್ ಅಹ್ಮದ್ ಖಾನ್ ನೇರ ಕಾರಣ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಆರೋಪಿಸಿದ್ದಾರೆ.
ಚಾಮರಾಜಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಹಸು ಸಾಕಿದವರನ್ನು ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಸಂಚು ರೂಪಿಸಿದ್ದಾರೆ. ಅಲ್ಲಿ ಪಶು ಆಸ್ಪತ್ರೆಯನ್ನು ನೆಲಸಮ ಮಾಡಿ ಶಾಲೆ ನಿರ್ಮಿಸಲು ಹೊರಟಿದ್ದಾರೆ. ಬೇರೆ ಕಡೆ ಶಾಲೆ ಕಟ್ಟಲಿ ಎಂದರು.
ಮುಸ್ಲಿಮರಲ್ಲಿ ಒಳ್ಳೆಯವರಿದ್ದಾರೆ, ಆದರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ. ಎಫ್ಐಆರ್ ಸರಿಯಾಗಿ ಹಾಕಿಲ್ಲ, ಅಮಾಯಕನನ್ನು ಕರೆತಂದು ಕೂರಿಸಿದ್ದಾರೆ. ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ್ದಾರೆ. ಪ್ರಕರಣ ಮುಚ್ಚಿಹಾಕಲು ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಿಜವಾದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಚಾಮರಾಜಪೇಟೆಯಲ್ಲಿ ಸಿಸಿಕ್ಯಾಮರಾಗಳು ಹೆಚ್ಚು ಅಳವಡಿಸಬೇಕು. ಜಮೀರ್ ಅಹಮ್ಮದ್ ಬಾಲಬಿಚ್ಚಲು ಸಿಎಂ ಸಿದ್ದರಾಮಯ್ಯ ಕಾರಣ. ಕಲ್ಲು ಎಸೆಯುವವರು, ಬೆಂಕಿ ಹಚ್ಚುವವರನ್ನು ತಯಾರು ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಕೊಡುವ ಹಣಕ್ಕಾ ಕಾಂಗ್ರೆಸ್ನವರು ಅವರ ಹಿಂದೆ ಹೋಗುತ್ತಾರೆ ಅಷ್ಟೇ. ಜಯನಗರ, ಬಿಟಿಎಂ ಲೇಔಟ್ ಎಲ್ಲೂ ನಡೆಯದ ಘಟನೆ ಚಾಮರಾಜಪೇಟೆಯಲ್ಲಿ ಏಕೆ ನಡೆಯುತ್ತದೆ ಎಂದು ಪ್ರಶ್ನಿಸಿದರು.
ಶನಿವಾರ ತಡರಾತ್ರಿ ಯಾರೋ ಕಿಡಿಗೇಡಿಗಳು ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರ ನಿವಾಸಿ ಕರ್ಣ ಎಂಬುವರ 3 ಹಸುಗಳ ಕೆಚ್ಚಲನ್ನು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದರು.