
ಕಾರ್ಕಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆನೀಡಿದ ದಿನ ಕಾರ್ಕಳ ತಾಲೂಕಿನಲ್ಲಿ ಮೀನು ಸಾಗಾಟದ ಲಾರಿಯೊಂದಕ್ಕೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಲ್ಲು ತೂರಾಟ ನಡೆಸಿದ ಆರೋಪಿಗಳಾದ ಕಾರ್ಕಳದ ಬಸ್ ಚಾಲಕ ದುರ್ಗಾಪ್ರಸಾದ್ ಅಲಿಯಾಸ್ ಪ್ರಸಾದ್,ಬೆಳುವಾಯಿಯ ಬಸ್ ಕಂಡಕ್ಟರ್ ಪ್ರಮೋದ್ ಮತ್ತು ಬಂಟ್ವಾಳದ ಅರಳ ನಿವಾಸಿ ಶಿವರಾಜ್ ಅಲಿಯಾಸ್ ಶಿವ ಎಂಬವರನ್ನು ಬಂಧಿಸಲಾಗಿದೆ.
ಮೇ 2 ರಂದು ಮಣಿ ಎಂಬವರು ಉಡುಪಿಯ ಮಲ್ಪೆ ಬಂದರಿನಿಂದ ತಮಿಳುನಾಡಿಗೆ ಮೀನು ಸಾಗಿಸುತ್ತಿದ್ದಾಗ ಕಾರ್ಕಳ ಪರ್ಪಲೆ ಬಳಿ ಎರಡು ಬೈಕುಗಳಲ್ಲಿ ಬಂದ ಮುಸುಕುಧಾರಿಗಳು ಲಾರಿಯ ಮುಂಭಾಗದ ಗಾಜಿಗೆ ಕಲ್ಲು ಎಸೆದು ಪರಾರಿಯಾಗಿದ್ದರು. ಇದರಿಂದ ಗಾಜು ಪುಡಿಯಾಗಿ ಸುಮಾರು 15 ಸಾವಿರ ನಷ್ಟ ಸಂಭವಿಸಿದೆ ಎಂದು ಚಾಲಕ ಮಣಿ ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




