

.
.
.
.

ಕಾರ್ಕಳ, ಫೆ.04: ಕೆರ್ವಾಶೆ ಗ್ರಾಮ ಪಂಚಾಯತ್ ಸದಸ್ಯನೋರ್ವ ಸರ್ಕಾರಿ ಮರಗಳನ್ನು ಕಡಿದು ಸಾಗಾಟ ಮಾಡಿದ ಆರೋಪ ಕೇಳಿಬಂದಿದೆ. ಕೆರ್ವಾಶೆ ಪಂಚಾಯತ್ ಸದಸ್ಯ ಧರ್ಮರಾಜ ಜೈನ್ ಎಂಬವರು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಸರ್ಕಾರಿ ಅರಣ್ಯದಲ್ಲಿನ ಸಾವಿರಾರು ರೂ ಮೌಲ್ಯದ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆರ್ವಾಶೆಯ ಹುರಿಕುಮೇರಿ ಎಂಬಲ್ಲಿನ ಅಂಗು ಪೂಜಾರಿ ಎಂಬವರ ಕುಮ್ಕಿ ಜಾಗದ ಪಕ್ಕದ ಸರ್ಕಾರಿ ಜಾಗದಲ್ಲಿನ ಮರಗಳನ್ನು ಕಡಿದಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಧರ್ಮರಾಜ್ ಜೈನ್ ಈ ಹಿಂದೆಯೂ ಸರ್ಕಾರಿ ಮರಗಳನ್ನು ಕಡಿದು ಸಾಗಾಟ ಮಾಡಿರುವ ಆರೋಪವಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಿಂದಲೇ ಮರಗಳ್ಳತನ ನಡೆಯುತ್ತಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಈ ಕುರಿತು ಅರಣ್ಯ ರಕ್ಷಕ ಚಂದ್ರಕಾಂತ್ ರನ್ನು ಕೇಳಿದಾಗ ಧರ್ಮರಾಜ ಜೈನ್ ಅವರು ಅಂಗು ಪೂಜಾರಿಯವರ ಕುಮ್ಕಿ ಜಾಗದ ರಸ್ತೆಗೆ ತಾಗಿಕೊಂಡಿದ್ದ ಮರದ ಗೆಲ್ಲಗಳನ್ನು ಕಡಿದಿದ್ದು, ಯಾವುದೇ ಮರಗಳನ್ನು ಕಡಿದಿಲ್ಲ ಎಂದು ಮರ ಕಳ್ಳತನ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಮರ ಅಥವಾ ಮರದ ಗೆಲ್ಲು ಕಡಿಯಲು ಅವಕಾಶವಿಲ್ಲ, ಆದ್ದರಿಂದ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಅರಣ್ಯ ಸಂಪತ್ತು ಲೂಟಿಯ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

.
.
.
.