ಹೆಬ್ರಿ: ಕುಚ್ಚೂರು- ಮಾಂಡಿ ಮೂರ್ಕೈ ಸಂಪರ್ಕಿಸುವ ಕುಚ್ಚೂರು ಕಂಚರ್ಕಳ ಎಂಬಲ್ಲಿನ ಶಿಥಿಲಾವಸ್ಥೆಯ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಿದ್ದಾಪುರ, ಹೆಬ್ರಿ ಸಂಪರ್ಕ ರಸ್ತೆ ಬಂದ್ ಆಗಿ ಜನರು ಮಡಾಮಕ್ಕಿ,ಸೋಮೇಶ್ವರ ಅಥವಾ ಬೇಳಂಜೆ ,ಅಲ್ಬಾಡಿ ಮಾರ್ಗವಾಗಿ 10 ರಿಂದ 12 ಕಿ.ಮೀ ಸುತ್ತಿಬಳಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಕುಚ್ಚೂರು ಕಂಚರ್ಕಳ ಎಂಬಲ್ಲಿನ ಕಿರುಸೇತುವೆ ಶಿಥಿಲಗೊಂಡಿದ್ದು ಪ್ರತೀ ಮಳೆಗಾಲದಲ್ಲಿ ಇಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಬಾರಿ ಸರಕಾರ ನೂತನ ಸೇತುವೆಗೆ ಸುಮಾರು ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸಿದ್ದರ ಪರಿಣಾಮ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದೀಗ ಭಾರೀ ಮಳೆಯಾಗುತ್ತಿದ್ದು,ಸೇತುವೆ ಕಾಮಗಾರಿ ಸ್ಥಗಿತವಾಗಿ ಹೆಬ್ರಿಯಿಂದ ಸುಮಾರು 10 ಗ್ರಾಮಗಳ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ಇದೀಗ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಮಂಗಳವಾರ ಹೆಬ್ರಿ ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದ್ದಾರೆ.