
ಹೆಬ್ರಿ,ಫೆ.09 : ಸರ್ವವ್ಯಾಪಿ, ಸರ್ವಶಕ್ತನಾದ ಭಗವಂತನ ಕುರಿತಾಗಿ ಪ್ರತಿನಿತ್ಯವೂ ಚಿಂತನೆ ಮಾಡುತ್ತಾ ನಮ್ಮ ಸಮಯವನ್ನು ಸದ್ವಿನಿಯೋಗ ಮಾಡಬೇಕು. ಇಹಲೋಕದಲ್ಲಿ ನಾವು ಮಾಡುವ ಉತ್ತಮ ಕೆಲಸ,ಕರ್ಮಾಧಿಗಳಿಂದ ಪರಲೋಕದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಕಾಪು ಕಲ್ಯದ ವಿದ್ವಾನ್ ಅಶೋಕ ಆಚಾರ್ಯ ಹೇಳಿದರು.
ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದಲ್ಲಿ ನಡೆದ ವರ್ಧಂತ್ಯುತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.
ವೇದಗಳು, ಶಾಸ್ತ್ರಗಳು ನಮ್ಮ ಜೀವನ ಸಾಗಿಸಲು ಬೇಕಾದ ಅತ್ಯುತ್ತಮ ಜ್ಞಾನವನ್ನು ನೀಡುವ ಗ್ರಂಥಗಳು. ಅದನ್ನು ಸದಾಕಾಲ ಅಳವಡಿಸಿಕೊಂಡು ಅನುಸರಿಸಿದಾಗ ನೆಮ್ಮದಿಯ ಜೀವನ ನಡೆಸಬಹುದು. ಲಕ್ಷ್ಮೀ ಸ್ವರೂಪಿಣಿಯಾದ ಕಹಿ ಬೇವು ಹಾಗೂ ನಾರಾಯಣ ಸ್ವರೂಪನಾದ ಅಶ್ವತ್ಥವೃಕ್ಷದ ಜೊತೆಗೆ ವಿವಾಹ ಮಹೋತ್ಸವ ಮಾಡುವುದರಿಂದ ಅಶ್ವತ್ಥನಾರಾಯಣನ ಅನುಗ್ರಹ ನಮಗೆ ಸಿಗುತ್ತದೆ. ಪ್ರತಿಷ್ಠಾ ದಿನದಲ್ಲಿ ಮಾಡುವ ದೇವತಾರಾಧನೆಯಿಂದ ಸಾನಿಧ್ಯ ವೃದ್ಧಿಯಾಗಿ ಎಲ್ಲರಿಗೂ ಒಳಿತಾಗುತ್ತದೆ. ಜ್ಞಾನ ಯಜ್ಞ ಸಹಿತ ವಿವಿಧ ಧಾರ್ಮಿಕ ಕಾರ್ಯಗಳಿಂದ ವಿಠ್ಠಲ ದೇವರ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದರು.
ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ, ವಿದ್ವಾನ್ ಅನಂತಕೃಷ್ಣ ಭಟ್ ಶೆಡ್ಯ,ಕಡಂದಲೆ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಅರ್ಚಕ ನಾರಾಯಣ ಭಟ್ ವಂದಿಸಿದರು.
ದೇವರ ಸನ್ನಿಧಿಯಲ್ಲಿ ಮೂಲಮಂತ್ರ ಹೋಮ, ದೇವರಿಗೆ ಕಲಶಾಭಿಷೇಕ, ವಿಷ್ಣು ಸಹಸ್ರನಾಮಾರ್ಚನೆ, ಮಹಾಪೂಜೆ, ಅಶ್ವತ್ಥ ವಿವಾಹ ಮಹೋತ್ಸವ, ಧಾರ್ಮಿಕ ಪ್ರವಚನ,ಅನ್ನ ಸಂತರ್ಪಣೆ ನಡೆಯಿತು. ಖ್ಯಾತ ಸ್ಯಾಕ್ಸೋಫೋನ್ ಕಲಾವಿದೆ ಭಾರತಿ ಗೋಪಾಲ್ ಶಿವಪುರ ಮತ್ತು ಕರುಣಾಕರ ಸೇರಿಗಾರ ಮುದ್ರಾಡಿ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ಅನಂತಪದ್ಮನಾಭ ಮಹಿಳಾ ಭಜನಾ ಮಂಡಳಿ, ಹೆಬ್ರಿ ಇವರಿಂದ ಲಕ್ಷ್ಮೀ ಶೋಭಾನೆ ಮತ್ತು ಭಜನೆ,ಸುಬ್ರಮಣ್ಯ ಕಂಗಿನ್ನಾಯ ಕಬ್ಬಿನಾಲೆ ಮತ್ತು ಬಳಗದವರಿಂದ ಭಜನೆ, ತುಂಡುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಬಲ್ಲಾಡಿ ಸುಮನಾ ಭಟ್ ಮತ್ತು ಬಳಗದವರಿಂದ ನೃತ್ಯ, ಅಡ್ಕ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಹಾಗೂ ಬಲ್ಲಾಡಿ ಅರ್ಧನಾರೀಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ,ಅಷ್ಟಾವಧಾನ ಸೇವೆ, ರಂಗಪೂಜೆ ನಡೆಯಿತು.ಊರ, ಪರವೂರ ಭಕ್ತಾದಿಗಳ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಂಡಿತು.

.
.
.
.
.
.
.

.
.
.
.
