Share this news

ಕಾರ್ಕಳ: ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲಿನ ಗೋಡೆಯ ಮೇಲೆ ದೇಶದ್ರೋಹಿ ಹಾಗೂ ಹಿಂದೂ ವಿರೋಧಿ ಗೋಡೆಬರಹ ಬರೆದ ಪ್ರಕರಣ ನಡೆದು ಇಷ್ಟು ದಿನಗಳಾದರೂ ಯಾವುದೇ ಸುಳಿವು ಇಲ್ಲದಿರುವುದು ಈ ಪ್ರಕರಣ ಮುಚ್ಚಿ ಹಾಕುವ ತಂತ್ರಗಾರಿಕೆ ನಡೆಯತ್ತಿದೆಯೇ ಎನ್ನುವ ಸಂಶಯ ಮೂಡಿದೆ. ಇಂತಹ ಅಕ್ಷಮ್ಯ ಅಪರಾಧ ಕೃತ್ಯದ ಪ್ರಕರಣವನ್ನು ಭೇದಿಸಿ ತಪ್ಪಿತಸ್ಥ ದೇಶ ದ್ರೋಹಿಯನ್ನು ಬಂಧಿಸಿ ಶಿಕ್ಷೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಯಿತೇ? ಪೊಲೀಸ್ ಇಲಾಖೆ ಅಷ್ಟು ದುರ್ಬಲವಾಯಿತೇ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಶ್ನಿಸಿದ್ದಾರೆ.

ಹಾಸ್ಟೆಲ್ ಎಂದ ಮೇಲೆ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿರುತ್ತಾರೆ, ಹಾಸ್ಟೆಲ್ ಆವರಣ ಸಿಸಿ ಕ್ಯಾಮರಾ ಕಣ್ಗಾವಲು ಇರುವ ಸ್ಥಳ, ಎಲ್ಲಾ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯೂ ದಾಖಲಾಗಿರುತ್ತದೆ, ಪ್ರಕರಣದ ಜಾಡು ಹಿಡಿಯಲು ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ, ಪ್ರಕರಣ ಬೇಧಿಸಲು ಪೊಲೀಸ್ ಇಲಾಖೆ ವಿಫಲವಾಗಲು ಕಾರಣವೇನು? ಪೊಲೀಸ್ ಇಲಾಖೆಯನ್ನು ಒತ್ತಡಕ್ಕೆ ಸಿಲುಕಿಸಲಾಯಿತೇ? ಅಥವಾ ಕಾಲೇಜಿನ ಆಡಳಿತ ಮಂಡಳಿಯ ಅಸಹಕಾರ ಕಾರಣವಾಯಿತೇ? ಅಥವಾ ರಾಜ್ಯದಲ್ಲಿ ಆಡಳಿತದಲ್ಲಿರುವ ರಾಜಕೀಯ ಪಕ್ಷದ ಒತ್ತಡ ಈ ಪ್ರಕರಣವನ್ನು ಹಳ್ಳ ಹಿಡಿಸಿತೇ? ಎಂಬೆಲ್ಲಾ ಸಂಶಯಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಇದೊಂದು ಸಾಧಾರಣ ಪ್ರಕರಣವಲ್ಲ, ಇದೊಂದು ದೇಶ ದ್ರೋಹಿ ಪ್ರಕರಣ, ಇದನ್ನು ಅಷ್ಟು ಲಘುವಾಗಿ ಪರಿಗಣಿಸುವಂತಿಲ್ಲ, ತಕ್ಷಣ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಬಂಧಿಸುವ ಕಾರ್ಯ ಆಗಬೇಕಿದೆ. ಕಾಲೇಜು ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸಲು ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯದೆ ಸಹಕರಿಸಬೇಕು.ಈಗಾಗಲೇ ABVP ವಿದ್ಯಾರ್ಥಿ ಸಂಘಟನೆಯು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ,ಆದ್ದರಿಂದ ತಕ್ಷಣವೇ ಈ ಪ್ರಕರಣದ ಆರೋಪಿಯನ್ನು ಬಂಧಿಸಿ,ಇಲ್ಲವಾದರೆ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ನವೀನ್ ನಾಯಕ್ ಎಚ್ಚರಿಸಿದ್ಧಾರೆ.

 

 

 

Leave a Reply

Your email address will not be published. Required fields are marked *