ಕಾರ್ಕಳ: ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸಿಕೊಂಡು ಬಂದಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ 185 ಕೋ.ರೂ ವಾಲ್ಮೀಕಿ ನಿಗಮದ ಹಗರಣ,ಮುಡಾ ಹಗರಣ, ಅಬಕಾರಿ ಹಗರಣ,ಕಾರ್ಮಿಕ ಇಲಾಖೆಯ ಹಗರಣ ಹೀಗೆ ಸಾಲು ಸಾಲು ಹಗರಣದಲ್ಲಿ ತೊಡಗಿದೆ. ಸರ್ಕಾರದ ವೈಫಲ್ಯ ಖಂಡಿಸಿ ಜೂ 23 ರಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ವಿಕಾಸ ಕಚೇರಿಯಲ್ಲಿ ಪ್ರಧಾನ ಮಂತ್ರಿ ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ಕೂಡ ಸರಿಯಾಗಿ ಜಾರಿ ಮಾಡದೇ ಜನರಿಗೆ ಸುಳ್ಳು ಭರವಸೆ ನೀಡಿದೆ,ಮಾತ್ರವಲ್ಲದೇ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನೇ ಮರೆತು ಬಿಟ್ಟಿದೆ, ಎರಡು ವರ್ಷಗಳಲ್ಲಿ ಕಾರ್ಕಳ ತಾಲೂಕಿಗೆ ಕೇವಲ 10 ಕೋಟಿ ಅನುದಾನ ನೀಡಿದೆ ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಗ್ರಾಮಕ್ಕೆ 10 ಕೋಟಿ ಅನುದಾನ ಬಿಡುಗಡೆಯಾಗಿತ್ತು ಎಂದರು. ಇದರ ಜತೆಗೆ ಸರ್ಕಾರದ 9/11 ಹಾಗೂ ಪ್ರಾಧಿಕಾರದ ಅನುಮೋದನೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಬಡವರ ಮನೆ ನಿರ್ಮಾಣದ ಕನಸಿಗೆ ಸರ್ಕಾರ ಕೊಳ್ಳಿಯಿಟ್ಟಿದೆ.
ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಆಶ್ರಯ ಮನೆ ಕೊಟ್ಟಿಲ್ಲ,ಪ್ರತೀ ಪಂಚಾಯತಿಗೂ ಬಡವರಿಗೆ ಕನಿಷ್ಟ 100 ಮನೆ ನಿಗದಿಪಡಿಸಬೇಕು ಆದರೆ ಸರ್ಕಾರ ಬಡವರ ವಿರೋಧಿಯಾಗಿದೆ. ಇದಲ್ಲದೇ ಶಾಸಕರ ಅಧ್ಯಕ್ಷತೆಯಲ್ಲಿ ವಿಲೇವಾರಿಯಾಗಬೇಕಿದ್ದ ಅಕ್ರಮ ಸಕ್ರಮ ಅರ್ಜಿಗಳನ್ನು ಶಾಸಕರ ಗಮನಕ್ಕೆ ತರದೇ ನೇರವಾಗಿ ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ಅರ್ಜಿ ವಿಲೇವಾರಿ ಮಾಡಲಾಗುತ್ತಿದ್ದು, ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದ ಕೃಷಿಕರ ಅರ್ಜಿಗಳನ್ನು ಕಸದ ಎಸೆಯಲಾಗುತ್ತಿದ್ದು ಕೃಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ರಾಜ್ಯದಲ್ಲಿ ವೃದ್ಧಾಪ್ಯ ಯೋಜನೆ 21.80 ಲಕ್ಷ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯ 31 ಲಕ್ಷ ಫಲಾನುಭವಿಗಳ ಪೈಕಿ ಹಾಲಿ ಕಾಂಗ್ರೆಸ್ ಸರ್ಕಾರ
9 ಲಕ್ಷ ವೃದ್ಧಾಪ್ಯ ಯೋಜನೆ ಹಾಗೂ 14 ಲಕ್ಷ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳನ್ನು ರದ್ದುಪಡಿಸಲು ಮುಂದಾಗಿದೆ.ಈ ಯೋಜನೆ ರದ್ಧಾದರೆ ಗೃಹ ಲಕ್ಷ್ಮೀ ಯೋಜನೆ ಕೂಡ ರದ್ದಾಗಲಿದೆ.ಅಂತಿಮವಾಗಿ ರಾಜ್ಯ ಸರ್ಕಾರ ನೆಪವೊಡ್ಡಿ ಎಲ್ಲಾ ಯೋಜನೆಗಳನ್ನು ನಿಲ್ಲಿಸಲಿದೆ.ಇದರ ವಿರುದ್ಧ ಬೃಹತ್ ಜನಾಂದೋಲ ನಡೆಯಬೇಕು ಈ ನಿಟ್ಟಿನಲ್ಲಿ
ಜೂನ್ 23 ರಂದು ಎಲ್ಲಾ ಗ್ರಾಮ ಪಂಚಾಯತಿ ಎದುರಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ
ಪ್ರತಾಪ ಸಿಂಹ ನಾಯಕ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾರ್ಯಕರ್ತರ ಜತೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಎಂ.ಕೆ ವಿಜಯಕುಮಾರ್,ಬಿಜೆಪಿ ಜಿಲ್ಲಾ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ, ನವೀನ್ ನಾಯಕ್, ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು.