ಕಾರ್ಕಳ: “ಇಂದು ಓದುವ ವಿಧಾನ ಬದಲಾಗಿ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಗೋಸ್ಕರ ಓದದೆ ಜ್ಞಾನಕೋಸ್ಕರ ಓದುವಂತವರಾಗಬೇಕು. ಆಗ ಮಾತ್ರ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ” ರಾಷ್ಟ್ರೀಯ ಮಟ್ಟದ ಜೆಸಿಐ ತರಬೇತುದಾರರು ಹಾಗೂ ಖ್ಯಾತ ವಾಗ್ಮಿಗಳಾದ ಕೆ.ರಾಜೇಂದ್ರ ಭಟ್ ತಿಳಿಸಿದರು.
ಅವರು ಕ್ರಿಯೇಟಿವ್ ಕಾಲೇಜು ಕಾರ್ಕಳದ ಹೊಸ ಪರಿಕಲ್ಪನೆಯಿಂದ ಹುಟ್ಟಿಕೊಂಡಿರುವ ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿ ಕಾರ್ಯಕ್ರಮದ 9ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಯುವುದು ಒಂದು ಹಬ್ಬ- ಸಂಭ್ರಮಿಸೋಣ ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜರುಗಿತು.
ಶರೀರದ ಒಳಗಿನಿಂದ ಎನರ್ಜಿ ಸೃಷ್ಟಿಸಿಕೊಂಡಾಗ ದೊರೆಯುವುದೇ ಸ್ಫೂರ್ತಿ, ವಿದ್ಯಾರ್ಥಿಗಳು ಪ್ರಯೋಗ ಮಾಡಬಹುದಾದ 10 ಸ್ಪೂರ್ತಿಗಳ ಬಗ್ಗೆ ಉದಾಹರಣೆಗಳನ್ನು ನೀಡುತ್ತಾ ತಿಳಿಸಿದರು. ಎಲ್ಲ ಮಕ್ಕಳು ಅದ್ಭುತವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓದುವಿಕೆಯಲ್ಲಿ ಮೌನ ಓದುವಿನಿಂದಾಗುವ ಅನೇಕ ಲಾಭಗಳನ್ನು ತಿಳಿಸುತ್ತಾ, ಸ್ಮಾರ್ಟ್ ವರ್ಕ್ ಮಾಡಿದರೆ ಯಾವುದೇ ವಿಷಯಗಳು ಕಠಿಣವೆನಿಸುವುದಿಲ್ಲ ಕಡಿಮೆ ಪರಿಶ್ರಮ ಹಾಕಿ, ಆಸಕ್ತಿಯಿಂದ ಕೆಲಸ ಮಾಡುವುದೇ ಸ್ಮಾರ್ಟ್ ವರ್ಕ್ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ ಸಂಸ್ಥಾಪಕರಾದ ಅಶ್ವತ್ ಎಲ್. ರಾಜೇಂದ್ರ ಭಟ್ ಆವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು, ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.