Share this news

ಕಾರ್ಕಳ: ಅಧಿವೇಶನದ ಸಂದರ್ಭದಲ್ಲಿ ಸದನದ ಬಳಿ ಸ್ಪೀಕರ್ ಒಪ್ಪಿಗೆ ಇಲ್ಲದೆ ಶಾಸಕರನ್ನು ಬಂಧಿಸುವAತಿಲ್ಲ ಎಂದಿದ್ದರೂ ಕೂಡ, ರಾಜ್ಯ ಕಾಂಗ್ರೆಸ್ ಸರ್ಕಾರ, ಅದರಲ್ಲೂ ಡಿ.ಕೆ ಶಿವಕುಮಾರ್ ಲಕ್ಷ್ಮಿ ಹೆಬ್ಬಾಳ್ಳರ್ ಬೆನ್ನಿಗೆ ನಿಂತು ಅತ್ಯಂತ ದರ್ಪದಿಂದ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರನ್ನು ಬಂಧಿಸಿರುವ ಘಟನೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಮೀರಿಸುವಂತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಅಸಮಧಾನ ಹೊರಹಾಕಿದ್ದಾರೆ.

ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂಬ ಹೇಳಿಕೆಯನ್ನು ಮಾಧ್ಯಮದ ಮುಂದೆಯೇ ಹೇಳಿದ್ದರೂ ಕೂಡ ಈ ಸರ್ಕಾರ ಮುಸ್ಲಿಂ ಓಲೈಕೆಗಾಗಿ ದೇಶದ್ರೋಹಿ ಹೇಳಿಕೆ ತಮ್ಮ ಕಿವಿಗೆ ಕೇಳಿಸದ ರೀತಿ ನಡೆದುಕೊಂಡಿರುವುದು ಮಾತ್ರವಲ್ಲದೆ ಈ ಪ್ರಕರಣದಲ್ಲಿ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳು ಗೃಹ ಸಚಿವರು ಬಹಿರಂಗವಾಗಿ ಹೇಳಿದ್ದರು. ಆದರೆ ಸಿ.ಟಿ. ರವಿಯವರ ಘಟನೆಯಲ್ಲಿ ಮಾನ್ಯ ಸಭಾಪತಿಗಳೇ ‘ದಾಖಲೆ ಇಲ್ಲ’ ಎಂದು ರೂಲಿಂಗ್ ಕೊಟ್ಟರೂ ಕೂಡ, ಅದಕ್ಕೆ ವಿರುದ್ಧವಾಗಿ ತಮ್ಮ ಅಧಿಕಾರ ಬಲ ಬಳಸಿಕೊಂಡು, ಸುವರ್ಣ ಸೌಧದ ಆವರಣದಲ್ಲಿಯೇ ಗೂಂಡಗಳನ್ನು ಬಿಟ್ಟು ಆಕ್ರಮಣ ಮಾಡಿಸಿ, ನಂತರ ಯಾವುದೇ ನೋಟಿಸ್ ನೀಡದೆ ಪೊಲೀಸರನ್ನು ಬಳಸಿಕೊಂಡು ಅತ್ಯಂತ ನಿಕೃಷ್ಟವಾಗಿ ಬಂಧಿಸಿದ ಘಟನೆ, ಡಿ ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ದರ್ಪ-ಕ್ರೌರ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಒಬ್ಬ ಶಾಸಕನನ್ನು ಬಲವಂತವಾಗಿ ಪೊಲೀಸ್ ವಾಹನಕ್ಕೆ ತಳ್ಳುವುದು, ಅನಾಮತಾಗಿ ಎತ್ತಿಕೊಂಡು ಹೋಗುವುದು, ಅವರನ್ನು ಗಾಯಗೊಳಿಸಿ ಹಿಂಸಿಸುವುದು ನೋಡಿದರೆ ಇದೊಂದು ಬೇರೆ ದುಷ್ಕೃತ್ಯದ ಷಡ್ಯಂತ್ರ ಎಂದು ಸಾಮಾನ್ಯ ಜನತೆಗೂ ಅರಿವಾಗುತ್ತಿದೆ. ಇಡೀ ರಾತ್ರಿ ಸಿನಿಮಾ ಶೈಲಿಯಲ್ಲಿ ಪೋಲಿಸ್ ವಾಹನದಲ್ಲಿ ನೀರು ಕೊಡದೆ ರಸ್ತೆಯುದ್ದಕ್ಕೂ ತಿರುಗಾಡಿಸಿದ ಪೊಲೀಸರಿಗೆ ಪದೇ ಪದೇ ದೂರವಾಣಿ ಕರೆಗಳ ಮುಖಾಂತರ ನಿರ್ದೇಶನ ನೀಡುತ್ತಿದ್ದ ವ್ಯಕ್ತಿ ಯಾರೆಂಬುದು ಬಹಿರಂಗ ಪಡಿಸಬೇಕು. ಸದನದ ಒಳಗೆ ಶಾಸಕರನ್ನು ಬಂಧಿಸಲು ಸಭಾಪತಿಗಳ ಅನುಮತಿ ಹೇಗೆ ಪಡೆಯಬೇಕೊ ಹಾಗೆ ಸದನದ ಹೊರಗೂ ಅಥವಾ ಎಲ್ಲಿಯೂ ಶಾಸಕರನ್ನು ಬಂಧಿಸುವುದಿದ್ದರೆ ಅದು ಸಭಾಧ್ಯಕ್ಷರ ಗಮನಕ್ಕೆ ಬರಬೇಕು, ಅವರ ಅನುಮತಿ ಪಡೆಯಬೇಕು. ಇದು ಒಬ್ಬ ಶಾಸಕನ ಶಾಸನಬದ್ಧ ಹಕ್ಕು ಕೂಡ ಹೌದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದರ ಅರಿವು ಪೊಲೀಸ್ ಇಲಾಖೆಗೆ ಇರಲಿಲ್ಲವೇ? ಇದರ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಗೃಹ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದರ ನಡುವೆ ಹೈಕೋರ್ಟ್ ನಿಂದ ಸಿ.ಟಿ. ರವಿ ಅವರ ಬಂಧನದ ವಿರುದ್ಧ ಬಂದ ಆದೇಶ ಸ್ವಾಗತರ್ಹ. ಇದು ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ, ಕುತಂತ್ರ ರಾಜಕಾರಣಕ್ಕೆ ಆದ ಅತಿ ದೊಡ್ಡ ಹಿನ್ನಡೆ. ಇಂತಹ ದರ್ಪ ರಾಜಕೀಯ ಹೆಚ್ಚು ದಿನ ನಡೆಯುವುದಿಲ್ಲ. ಕರ್ನಾಟಕದ ಜನತೆ ಇದೆಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *