ಮಂಗಳೂರು :ಮಂಗಳೂರಿನ ಸೆನ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿ ಸೈಬರ್ ವಂಚಕರಿಗೆ ಭಾರತದಿಂದ ವಿವಿಧ ಕಂಪನಿಗಳ 500ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಪೂರೈಸುತ್ತಿದ್ದ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಣಾತಲ ವಾಸುದೇವ ರೆಡ್ಡಿ (25) ಬಂಧಿತ ಆರೋಪಿ. ಆರೋಪಿ ಕಣಾತಲ ವಾಸುದೇವ ರೆಡ್ಡಿ ಓಡಿಶಾ ಮೂಲದವನು. ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಕಣಾತಲ ವಾಸುದೇವ ರೆಡ್ಡಿಯನ್ನು ಬಂಧಿಸಿದ್ದಾರೆ.
ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜು ಎಂಬುವನು ಹಣ ವಿನಿಯೋಗಿಸಲು ವಾಟ್ಸಾಪ್ ಮೂಲಕ ನಕಲಿ ಲಿಂಕ್ ಕಳುಹಿಸಿ ಅದರ ಮೂಲಕ ಲಕ್ಷಾಂತರ ರೂ. ದೋಚಿದ್ದನು. ಹೀಗೆ, ಹಂತ ಹಂತವಾಗಿ 10,84,017 ರೂಪಾಯಿ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣ ಸಂಬAಧ ಪೊಲೀಸರು ಈಗಾಗಲೇ ಸೈಬರ್ ವಂಚಕ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ಬಂಧಿಸಿದ್ದಾರೆ.
ಆರೋಪಿ ನಡವೂಲು ವೀರವೆಂಕಟ ಸತ್ಯನಾರಾಯಣ ರಾಜುನನ್ನು ವಿಚಾರಣೆಗೆ ಒಳಪಡಿಸಿದಾಗ ಸಿಮ್ ಮಾರಾಟ ದಂಧೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಕಣಾತಲ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು. ಆರೋಪಿ ಕಣಾತಲ ದುಬೈಗೆ ತೆರಳು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು. ಇನ್ನುಳಿದ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರಿಂದ ತನಿಖೆ ಮುಂದುವರೆದಿದೆ.
