ಕಾರ್ಕಳ: ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಅವರು ಗುರುವಾರ ಬೆಳಗ್ಗೆ ಕಾರ್ಕಳಕ್ಕೆ ಭೇಟಿ ನೀಡಿ ಆನೆಕೆರೆ ಬಸದಿ ಹಾಗೂ ರಾಮ ಸಮುದ್ರ ಕೆರೆ ವೀಕ್ಷಿಸಿ ಬಳಿಕ ಮಾತನಾಡಿ,ಈಗಾಗಲೇ ಕಾರ್ಕಳದ ಆನೆಕೆರೆ ಬಸದಿ, ರಾಮಸಮುದ್ರ ಹಾಗೂ ವರಂಗ ಬಸದಿಗಳ ಸಮಗ್ರ ಅಭಿವೃದ್ಧಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಒಟ್ಟು 116 ಕೋ.ರೂ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದು, ಈ ಮೂರೂ ಕ್ಷೇತ್ರಗಳನ್ನು ಕೇಂದ್ರ ಸರಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಅಭಿವೃದ್ಧಿಪಡಿಸಲು ಅನುದಾನ ಒದಗಿಸುವುದಾಗಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದ 3 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈಗಾಗಲೇ ನೀಲ ನಕಾಶೆ ಸಿದ್ದಪಡಿಸಿ, ಮೊದಲನೇ ಹಂತದಲ್ಲಿ 60 ಕೋ.ರೂ ಹಾಗೂ ಎರಡನೇ ಹಂತದಲ್ಲಿ 56 ಕೋ,ರೂ ಸೇರಿ ಒಟ್ಟು 116 ಕೋ.ರೂ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ ಆನೆಕೆರೆ ಬಸದಿಯಲ್ಲಿ ವಾಕಿಂಗ್ ಟ್ರಾಕ್, ಕೇಬಲ್ ಕಾರು ಅಳವಡಿಸುವ ಹಾಗೂ ಈ ತಾಣವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕೋm ಶ್ರೀನಿವಾಸ ಪೂಜಾರಿ,ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ,ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್,ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುಮಾರ್, ಪುರಸಭೆ ಅಧ್ಯಕ್ಷ ಯೊಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್,ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಹಿರಿಯ ನ್ಯಾಯವಾದಿ ಎಂ.ಕೆ ವಿಜಯ ಕುಮಾರ್, ಮಹಾವೀರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು