Share this news

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುನಿಲ್ ಕುಮಾರ್ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಿಯ ಕೃಪೆಯಿಂದ ಹಾಗೂ ಭಕ್ತಾದಿಗಳ ನೆರವಿನಿಂದ 19 ಕೋ.ರೂ ವೆಚ್ಚದಲ್ಲಿ ಕೇವಲ 9 ತಿಂಗಳಲ್ಲಿ ಇಷ್ಟು ದೊಡ್ಡ ದೇವಸ್ಥಾನದ ಕೆಲಸವು ನಿರ್ವಿಘ್ನವಾಗಿ ನೆರವೇರಿದೆ.ದೇವಿಯ ಆಜ್ಞೆಯಂತೆ ಮುಂದಿನ ಮಾರ್ಚ್ 9 ರಿಂದ ಮಾರ್ಚ್14 ರ ವರೆಗೆ ಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಮುಖ್ಯಪ್ರಾಣ,ನಾಗದೇವರು,ಪರಿವಾರ ದೈವಗಳ ಪುನಃ ಪ್ರತಿಷ್ಠಾ ಮಹೋತ್ಸವವು ಹಲವು ರೀತಿಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದರು.


ಮಾರ್ಚ್ 14ರಂದು ನಡೆಯಲಿರುವ ಧಾರ್ಮಿಕ ಸಭಾ‌ ಕಾರ್ಯಕ್ರಮದಲ್ಲಿ ಶೃಂಗೇರಿ ಸಂಸ್ಥಾನದ ಭಾರತೀ ತೀರ್ಥ ಸ್ವಾಮೀಜಿ ,ಧರ್ಮಸ್ಥಳದ‌ ಡಾ.ಡಿ ವೀರೇಂದ್ರ ಹೆಗ್ಗಡೆ ,ಸುಬ್ರಹ್ಮಣ್ಯ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.ಈ ಪುಣ್ಯ ಕಾರ್ಯದಲ್ಲಿ ಕಾರ್ಕಳ ತಾಲೂಕಿನ ಎಲ್ಲೆಡೆಯಿಂದ ಭಕ್ತರು ಬಂದು ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.


ಆಮಂತ್ರಣ ಪತ್ರಿಕೆ ಬಿಡುಗಡೆಗೂ‌ ಮುನ್ನ ದೇವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರ್ಚಕರು ಹಾಗೂ ತಂತ್ರಿಗಳಾದ ಜಾರ್ಕಳ ಪ್ರಸಾದ್ ತಂತ್ರಿ,ಆಡಳಿತ ಮೊಕ್ತೇಸರರಾದ ಕೆ.ಬಿ ಗೋಪಾಲಕೃಷ್ಣ ರಾವ್, ವಿಜಯ ಶೆಟ್ಟಿ, ಸುಜಯಕುಮಾರ್ ಶೆಟ್ಟಿ,ನಿತ್ಯಾನಂದ ಪೈ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *