ಕಾರ್ಕಳ : ಬಿಜೆಪಿ ವತಿಯಿಂದ 2ನೇ ಬೂತ್ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನೆಯು ನಾಳೆ ಸಂಜೆ 5 ಗಂಟೆಗೆ ಇವತ್ತೂರು ಗ್ರಾಮದ ಕೊಳಕೆ ಶಾಲೆ ಬಳಿಯ ಕಾಲೋನಿಯಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆಯವರು ತಿಳಿಸಿದ್ದಾರೆ.

ಈಗಾಗಲೇ ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ಸೂಚನೆಯಂತೆ ಜನವರಿ 2 ರಿಂದ 12 ರವರೆಗೆ ‘ಬೂತ್ ವಿಜಯ ಅಭಿಯಾನ’ ಯಶಸ್ವಿಯಾಗಿ ನಡೆದಿದ್ದು, ಬೂತ್ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜವನ್ನು ಕಟ್ಟಿ, ಕಾರ್ಯಕರ್ತರ ಸಭೆ, ಮಾಹಿತಿ ಮತ್ತು ವಾಟ್ಸ್ಆಪ್ ಗ್ರೂಪ್ಗಳನ್ನು ರಚಿಸುವುದರ ಮುಖಾಂತರ ಯಶಸ್ವಿಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಜನವರಿ 21 ರಿಂದ 29 ರವರೆಗೆ ನಡೆಸಲು ಪಕ್ಷ ಸೂಚಿಸಿದ್ದು, ಈ ಅಭಿಯಾನವನ್ನು ಕೂಡ ಯಶಸ್ವಿಗೊಳಿಸಿ ಕಾರ್ಯಕರ್ತರು ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಬೇಕೆಂದು ವಿನಂತಿಸಿದ್ದಾರೆ.

ಎರಡನೇ ಹಂತದಲ್ಲಿಯೂ ಕೂಡ ಐದು ಅಂಶಗಳ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರವನ್ನು ಮನೆ ಮನೆಗೆ ತಲುಪಿಸಲಿದ್ದೇವೆ. ಪಕ್ಷದ ಚಿಹ್ನೆಯ ಸ್ಟಿಕ್ಕರ್ ವಿತರಣೆ, ಈ ಹಿಂದಿನ ಪಕ್ಷದ ಸದಸ್ಯತ್ವ 3 ವರ್ಷ ಅವಧಿ ಮುಗಿದಿದ್ದು, ಮತ್ತೊಮ್ಮೆ ಮಿಸ್ಡ್ ಕಾಲ್ ಕೊಡುವುದರ ಮೂಲಕ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯಲಿದೆ.

ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಪರ್ಕ, ಸರ್ಕಾರದ ಸಾಧನೆಗಳ ಗೋಡೆಬರಹ ಮತ್ತು ಡಿಜಿಟಲ್ ಬರಹಗಳನ್ನು ಕೂಡ ಹಾಕಲಾಗುವುದು. ತಿಂಗಳ ಕೊನೆಯ ಭಾನುವಾರ ಪ್ರಧಾನಮಂತ್ರಿಗಳ ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ಪ್ರತೀ ಬೂತ್ಗಳಲ್ಲಿ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಆಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

