ಬೆಂಗಳೂರು: ಅಪರಾಧಿ ಮೃತಪಟ್ಟರೂ ಆತನಿಗೆ ಕೋರ್ಟ್ ವಿಧಿಸಿದ್ದ ದಂಡವನ್ನು ಆತನ ಆಸ್ತಿಯಿಂದ ಅಥವಾ ಆತನ ಆಸ್ತಿಯ ಉತ್ತರಾಧಿಕಾರಿಯಿಂದ ವಸೂಲಿ ಮಾಡಬಹುದೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹಾಸನದ ವ್ಯಕ್ತಿಯೊಬ್ಬ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣದಲ್ಲಿ ವ್ಯಕ್ತಿಯೋರ್ವನಿಗೆ ಸೆಷನ್ ಕೋರ್ಟ್ ದಂಡ ವಿಧಿಸಲಾಗಿತ್ತು ಆದ್ರೆ, ಅದರನ್ನು ವಿರೋಧಿಸಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ದುರದೃಷ್ಟವಶಾತ್ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇತ್ತ ಇಂದು (ಜನವರಿ 30) ಹೈಕೋರ್ಟ್, ಮೃತಪಟ್ಟರೂ ದಂಡ ಕಟ್ಟಬೇಕು ಎಂದು ಆದೇಶಿಸಿ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
ವಿದ್ಯುತ್ ಅನಧಿಕೃತ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ವ್ಯಕ್ತಿಯೊಬ್ಬರಿಗೆ ಹಾಸನದ ಹೆಚ್ಚುವರಿ ಸೆಷನ್ಸ್ ಕೋರ್ಟ್ ಒಟ್ಟು 29,204 ರೂಪಾಯಿ ದಂಡ ವಿಧಿಸಿತ್ತು. 2003 ರ ಭಾರತೀಯ ವಿದ್ಯುತ್ ಕಾಯ್ದೆಯ ಸೆಕ್ಷನ್ 135, 138 ಅಡಿ ವಿಧಿಸಿದ್ದ ದಂಡ ಪ್ರಶ್ನಿಸಿ ಅಪರಾಧಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ. ಮೇಲ್ಮನವಿ ವಿಚಾರಣೆ ವೇಳೆಯೇ 2019 ರಲ್ಲಿ ಅಪರಾಧಿ ಮೃತಪಟ್ಟಿದ್ದರು. ಅಪರಾಧಿ ಮೃತನಾದ ಬಗ್ಗೆ ಹೈಕೋರ್ಟ್ ಗೆ ಮೃತ ಅಪರಾಧಿ ಪರ ವಕೀಲ ಗಿರೀಶ್ ಬಲದರೆ ಮಾಹಿತಿ ನೀಡಿ ಕೇಸ್ ಮುಕ್ತಾಯಗೊಳಿಸಲ ಮನವಿ ಮಾಡಿದ್ದರು.
ಆದರೆ ಸಿಆರ್ ಪಿಸಿ ಸೆ. 394 ರಡಿ ಮೇಲ್ಮನವಿ ವಿಚಾರಣೆ ವೇಳೆ ಅಪರಾಧಿ ಮೃತನಾದರೆ, ಮೃತನಾದ 30 ದಿನಗಳಲ್ಲಿ ಅವನ ಹತ್ತಿರದ ಸಂಬಂಧಿಗಳು ಅರ್ಜಿ ಸಲ್ಲಿಸಿ ಮೇಲ್ಮನವಿ ವಿಚಾರಣೆ ಮುಂದುವರಿಸಬಹುದು. ಆದರೆ ಯಾರೂ ಅರ್ಜಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮೇಲ್ಮನವಿ ವಜಾಗೊಳಿಸಿದೆ.