ಕಾರ್ಕಳ : ಕೃಷಿ ಇಲಾಖೆ ಕಾರ್ಕಳ , ಆತ್ಮ ಅನುಷ್ಠಾನ ಸಮಿತಿ, ಗ್ರಾಮ ಪಂಚಾಯತ್ ದುರ್ಗ, ಧ. ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ, ಹಸಿರೆ ಉಸಿರು ಪರಿಸರ ಪ್ರೇಮಿ ಸಂಘಟನೆ ತೆಳ್ಳಾರು ಇವರ ಜಂಟಿ ಸಹಯೋಗದಲ್ಲಿ ಇಂದು ತೆಳ್ಳಾರಿನ ಪ್ರಗತಿಪರ ಕೃಷಿಕೆ ದೇವಕಿಯವರ ಮನೆ ವಠಾರದಲ್ಲಿ ತೋಟಗಾರಿಕೆ ಬೆಳೆಗಳಲ್ಲಿನ ರೋಗ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ದೇವಕಿಯವರು ಮಾತನಾಡಿ, ಇದೊಂದು ಉಪಯುಕ್ತ ಕಾರ್ಯಕ್ರಮವಾಗಿದ್ದು ಕೃಷಿಕರ ಸ್ವಕ್ಷೇತ್ರದಲ್ಲಿಯೇ ತಜ್ಞರು ಭೇಟಿ ನೀಡಿ ಮಾಹಿತಿಯನ್ನು ನೀಡಿದಾಗ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
ದುರ್ಗ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಸಂಸ್ಥೆಗಳು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಈ ಹಿಂದೆಯೂ ಹಲವಾರು ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು ಕೃಷಿಕರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಭಾಸ್ಕರ್.ವಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಇಲಾಖೆಯ ಜೊತೆಗೆ ನಿರಂತರವಾಗಿ ಕೃಷಿಕ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿದ್ದು ಮುಂದೆಯೂ ಸಹಕಾರ ನೀಡಲಿದೆ ಎಂದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸ್ವಾತಿ ತೋಟಗಾರಿಕೆ ಬೆಳೆಗಳಲ್ಲಿನ ರೋಗಬಾಧೆಗಳು ಹಾಗೂ ಅದಕ್ಕೆ ಪರಿಹಾರ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ತಾಂತ್ರಿಕ ಸಲಹೆಗಾರ ಅನಂತ ಪ್ರಭು ಮತ್ತು ಸಹಾಯಕ ಕೃಷಿ ಅಧಿಕಾರಿ ಸಿದ್ದಪ್ಪ ತುಡುಬಿನ್ ಇಲಾಖೆಯ ಯೋಜನೆಗಳು ಮತ್ತು ಮಣ್ಣಿನ ಮಹತ್ವದ ಬಗ್ಗೆ ವಿವರಿಸಿದರು.
ಒಕ್ಕೂಟದ ಅಧ್ಯಕ್ಷ ದಿನೇಶ್ ಆಚಾರ್ಯ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಚೈತ್ರಾ,ಹಸಿರೆ ಉಸಿರು ಪರಿಸರ ಸಂಘಟನೆಯ ಉದಯಕೃಷ್ಣ ಮಾನಸ,ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಸದಸ್ಯರುಗಳಾದ ಉಮಾವತಿ, ಮಹೇಶ್ ರಾವ್ ಉಪಸ್ಥಿತರಿದ್ದರು.
ಧ. ಗ್ರಾ. ಯೋಜನೆಯ ನಗರ ವಲಯ ಮೇಲ್ವಿಚಾರಕಿ ಗೀತಾ ಹೆಗ್ಡೆ ಸ್ವಾಗತಿಸಿ, ಯೋಜನೆಯ ತಾಲೂಕು ಕೃಷಿ ಅಧಿಕಾರಿ ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಶುಭಾ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಕೃಷಿಕರಿಗೆ ಅನುಕೂಲವಾಗುವ ನವೀನ ಯಂತ್ರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯು ಜರುಗಿತು.