ಕಾರ್ಕಳ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದು, ಕಾಂಗ್ರೆಸ್ ,ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎನ್ನುವುದು ಗಜ ಪ್ರಸವದಂತಾಗಿದೆ. ಈ ನಡುವೆ ಕಾಂಗ್ರೆಸ್ ಕೊನೆಗೂ 43 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿಲ್ಲ.

ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದ್ದು,ಪುತ್ತೂರಿನಿಂದ ಅಶೋಕ್ ಕುಮಾರ್ ರೈ ಕಣಕ್ಕಿಳಿಸಲಾಗಿದೆ. ಅತ್ಯಂತ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿನ ಕ್ಷೇತ್ರವಾದ ಕಾರ್ಕಳದಿಂದ ಬಂಟ ಸಮುದಾಯದ ಪ್ರಬಲ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿಯವರನ್ನು ಕಣಕ್ಕಿಳಿಸಲಾಗಿದೆ.

ಈಗಾಗಲೇ ಬಿಜೆಪಿಗೆ ಪ್ರಮೋದ್ ಮುತಾಲಿಕ್ ಬಣ ಟಕ್ಕರ್ ನೀಡಲು ಮುಂದಾಗಿದ್ದು,ಈ ನಡುವೆ ಉದಯ ಶೆಟ್ಟಿ ಸ್ಪರ್ಧೆಯಿಂದ ಕಾಂಗ್ರೆಸ್ ಮತ್ತೆ ರಣೋತ್ಸಾಹದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ.
ಒಟ್ಟಿನಲ್ಲಿ ಬಿಜೆಪಿ ಭದ್ರಕೋಟೆ ಕಾರ್ಕಳದಲ್ಲಿ ಹಲವು ಸಮಯದಿಂದ ಕಾಂಗ್ರೆಸ್ ಸ್ಪರ್ಧಿ ಯಾರು ಎನ್ನುವ ಗೊಂದಲಕ್ಕೆ ಕೊನೆಗೂ ಹೈಕಮಾಂಡ್ ತೆರೆ ಎಳೆದಿದೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕೆನ್ನುವ ಕೆಪಿಸಿಸಿ ನಿಯಮಾವಳಿಯಂತೆ ಕಾರ್ಕಳದಿಂದ ಮುದ್ರಾಡಿ ಮಂಜುನಾಥ ಪೂಜಾರಿ, ಡಿ,ಆರ್ ರಾಜು ,ನೀರೆ ಕೃಷ್ಣ ಶೆಟ್ಟಿ ಹಾಗೂ ಸುರೇಂದ್ರ ಶೆಟ್ಟಿ ಅರ್ಜಿ ಸಲ್ಲಿಸಿದ್ದರು.ಆದರೆ ತದನಂತರದಲ್ಲಿ ನಡೆದ ಅನಿರೀಕ್ಷಿತ ವಿದ್ಯಮಾನಗಳಲ್ಲಿ ಉದಯ ಶೆಟ್ಟಿ ಹೆಸರು ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿತ್ತು. ಈ ಬೆಳವಣಿಗೆಯ ನಡುವೆ ಮಂಜುನಾಥ ಪೂಜಾರಿ ಹಾಗೂ ಉದಯ ಶೆಟ್ಟಿ ನಡುವೆ ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆದಿತ್ತು. ಕೊನೆಗೂ ಹೈಕಮಾಂಡ್ ಉದಯ ಶೆಟ್ಟಿ ಅವರನ್ನೇ ಕಣಕ್ಕಿಳಿಸಿದ್ದು ಚುನಾವಣಾ ರಣಕಣದ ಚಿತ್ರಣವೇ ಬದಲಾಗಲಿದೆ.

ಎಐಸಿಸಿಯಿಂದ ಇಂದು 43 ಕ್ಷೇತ್ರಗಳಿಗೆ ಕಾಂಗ್ರೆಸ್ ಹುರಿಯಾಳುಗಳ 3ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆ ಪಟ್ಟಿ ಈ ಕೆಳಗಿನಂತಿದೆ.



