ನವದೆಹಲಿ: ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ವಿಚಾರಣೆ ಮಾಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದಲೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ತಲಾ 3,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಲಾಗಿದೆ. ನವದೆಹಲಿಯಲ್ಲಿ ಇಂದು (ಶುಕ್ರವಾರ) ನಡೆದ ಕಾವೇರಿ ನೀರು ಹಂಚಿಕೆ ವಿಚಾರದ ಕುರಿತ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಕರ್ನಾಟಕ್ಕೆ ಈ ಆದೇಶ ನೀಡಿದೆ.
ಕರ್ನಾಟಕದಲ್ಲಿ ಕುಡಿಯಲೂ ನೀರಿಲ್ಲವೆಂದು ವಾದ ಮಂಡಿಸಿದರೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ತಲಾ 3,000 ಕ್ಯೂಸೆಕ್ ನೀರನ್ನು ಹರಿಸುವಂತೆ ಆದೇಶವನ್ನು ಹೊರಡಿಸಿದೆ. ಕಳೆದೆರಡು ದಿನಗಳ ಹಿಂದೆ ಕಾವೇರಿ ನೀರು ನಿಯಂತ್ರಣಾ ಸಮಿತಿ (ಸಿಡಬ್ಲ್ಯೂಆರ್ಸಿ)ಯು 3,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಕರ್ನಾಟಕಕ್ಕೆ ಆದೇಶ ನೀಡಲಾಗಿತ್ತು. ಈಗ (ಸಿಡಬ್ಲ್ಯೂಆರ್ಸಿ)ಯ ಆದೇಶವನ್ನು ಸಿಡಬ್ಲ್ಯೂಎಂಎ ಎತ್ತಿ ಹಿಡಿದಿದೆ. ಇದರಿಂದ ಕರ್ನಾಟಕದ ಹೋರಾಟಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಕಾರಣ ಮಳೆಯ ಪ್ರಮಾಣ ಕುಂಠಿತವಾಗಿದೆ. ಡ್ಯಾಂಗಳಿಗೆ ಒಳ ಹರಿವಿನ ಪ್ರಮಾಣ ಇಳಿಕೆಯಾಗಿದೆ. ನೀರಿನ ಮಟ್ಟ ಕೂಡ ಪ್ರತಿವರ್ಷದಂತೆ ಸಂಗ್ರಹ ಆಗಿಲ್ಲ. ಕರ್ನಾಟಕದ ರೈತರ ಬೆಳೆಗಳಿಗೆ ನೀರು ಸಾಕಾಗುವುದಿಲ್ಲ ಎನ್ನುವ ಕರ್ನಾಟಕದ ಅಧಿಕಾರಿಗಳ ವಾದವನ್ನು ಒಪ್ಪದೇ, ಅಕ್ಟೋಬರ್ 16ರಿಂದ 31ರವರೆಗೆ ಪ್ರತಿನಿತ್ಯ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.














