ಕಾರ್ಕಳ: ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಕಳೆದ ಮೂರು ತಿಂಗಳಿನಿಂದ ಕಂಪೆನಿಯೊಂದರಲ್ಲಿ ಮನೆಯಿಂದಲೇ ಆನ್ ಲೈನ್ ಮೂಲಕ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಜೀವನಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಎಂಬಲ್ಲಿ ನಡೆದಿದೆ.
ಕಾರ್ಕಳ ಪೆರ್ವಾಜೆ ರಸ್ತೆಯ ಕಲ್ಲೊಟ್ಟೆ ಸಂಪತ್ ಕುಮಾರ್ ಎಂಬವರ ಪುತ್ರಿ ಚಾರ್ವಿ(23) ಎಂಬಾಕೆ ನೇಣಿಗೆ ಶರಣಾದ ಯುವತಿ.
ಚಾರ್ವಿ ಕಳೆದ ವರ್ಷವಷ್ಟೇ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆರಂಭದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಾರ್ವಿ ಇತ್ತೀಚೆಗೆ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿದ್ದರು. ಚಾರ್ವಿ ಸಹೋದರ ವಿದೇಶದಲ್ಲಿ ಕಂಪೆನಿಯೊಂದಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆಯಲ್ಲಿ ತಂದೆ ತಾಯಿ ಜತೆ ಚಾರ್ವಿ ವರ್ಕ್ ಫ್ರಂ ಹೋಮ್ ಮಾಡಿಕೊಂಡಿದ್ದರು.
ಅಕ್ಟೋಬರ್ 16ರಂದು ಸೋಮವಾರ ಎಂದಿನAತೆ ಬೆಳಗ್ಗೆ 11 ಗಂಟೆಗೆ ತಿಂಡಿ ತಿಂದು ರೂಮಿನೊಳಗೆ ಬಾಗಿಲು ಹಾಕಿಕೊಂಡ ಚಾರ್ವಿ ಬಳಿಕ ಸಂಜೆ 5.30 ಗೆ ಬಾಗಿಲು ತೆರೆದು ಊಟ ಮಾಡಿ ಮತ್ತೆ ಬಾಗಿಲು ಹಾಕಿಕೊಂಡು ರಾತ್ರಿ 8 ಗಂಟೆಯಾದರೂ ಹೊರಬರದ ಹಿನ್ನಲೆಯಲ್ಲಿ ಕಿಟಕಿಯಲ್ಲಿ ನೋಡಿದಾಗ ಚಾರ್ವಿ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಈಕೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಆದರೆ ಆಕೆಯ ಆತ್ಮಹತ್ಯೆಯ ಕುರಿತು ತಂದೆ ಸಂಪತ್ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದು ಮೊಬೈಲ್ ಪರಿಶೀಲಿಸುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಚಾರ ಗಮನಿಸಿದಾಗ ಚಾರ್ವಿ ಆತ್ಮಹತ್ಯೆಗೆ ಪ್ರೀತಿಪ್ರೇಮ ವಿಚಾರ ಕಾರಣವಾಯಿತೇ ಎನ್ನುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆ ಬಳಸುತ್ತಿದ್ದ ಮೊಬೈಲನ್ನು ಸೀಜ್ ಮಾಡಿ ಫೊರೆನ್ಸಿಕ್ ಲ್ಯಾಬ್ ಗೆ ರವಾನಿಸಿದ್ದು, ಈ ಘಟನೆಗೆ ನಿಜವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ



