ಕಾರ್ಕಳ: ಹಿರ್ಗಾನದ ಮೂರೂರಿನಲ್ಲಿ ಅಕ್ಟೋಬರ್ 12ರಿಂದ 18ರ ವರೆಗೆ ಬಿ ಎಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರದ ಸಮಾರೋಪ ಸಮಾರಂಭ ಊರಿನ ಗಣ್ಯರ ಸಮ್ಮುಖದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾಲಕ್ಮೀ ದೇವಸ್ಥಾನದ ಮುಕ್ತೇಸರರಾದ ಅಶೋಕ್ ನಾಯಕ್ ಮಾತನಾಡಿ, ಇಂತಹ ಶಿಬಿರಗಳಿಂದ ಊರಿನ ಅಭಿವೃದ್ಧಿಯ ಜೊತೆಗೆ ಸಮಾಜದಲ್ಲಿ ಒಂದು ಧನಾತ್ಮಕ ಬದಲಾವಣೆ ಬರಲು ಸಾಧ್ಯವಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆಯ ಅರಿವು ಉಂಟಾಗುತ್ತದೆ. ಯಾವಾಗಲು ನಾವೆಲ್ಲರೂ ಒಂದು ಎಂಬ ಭಾವದಿಂದ ಸಮಾಜಕ್ಕಾಗಿ ದುಡಿಯಬೇಕು ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಹಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಶಿಬಿರದ ಆರಂಭ ಸವಾಲಿನ ಕೆಲಸವಾಗಿದ್ದರು ಊರಿನ ಗಣ್ಯರು, ಮಹನೀಯರ ಮತ್ತು ದಾನಿಗಳಿಂದ ಈ ಕಾರ್ಯ ಯಶಸ್ವಿಯಾಗಲು ಕಾರಣವಾಯಿತು ಎಂದು ಈ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರನ್ನು ಸ್ಮರಿಸಿದರು.
ಬಿ. ಎಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಕ್ಲೇರಾ ವಾಸ್ ಮಾತನಾಡಿ, ನಮ್ಮ ಶಾಲೆಯಲ್ಲಿ ನಡೆದ ಈ ಶಿಬಿರವು ಅಭೂತಪೂರ್ವವಾಗಿ ನಡೆದಿದೆ. ಕ್ರಿಯೇಟಿವ್ ಕಾಲೇಜಿನ ಎಲ್ಲರೂ ಅತ್ಯಂತ ಸಹಕಾರ ಮನೋಭಾವದಿಂದ ಎಂಟು ದಿನಗಳ ಕಾಲ ಇದ್ದು ಅನೇಕ ವಿಚಾರಗಳನ್ನು ಕಲಿತರು. ಜೀವನದ ಅನುಭವಗಳನ್ನು ಗಳಿಸಿದರು. ಮುಂದೆಯೂ ವಿದ್ಯಾರ್ಥಿಗಳು ತಮ್ಮ ವಿನಯವಂತಿಕೆಯಿAದ ಜೀವನದಲ್ಲಿ ಮುಂದೆ ಬರುವಂತಾಗಲಿ ಎಂದು ಹಾರೈಸಿದರು.
ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯ. ಕಷ್ಟ ಬಂದಾಗ ಹೆದರದೆ ಎದುರಿಸಿ ಗೆಲ್ಲುವುದನ್ನು ಕಲಿಯಬೇಕು. ಕಷ್ಟದಿಂದ ಪಡೆದ ಫಲ ಅತ್ಯಂತ ಮೌಲ್ಯವನ್ನು ಹೊಂದಿದೆ. ಸೋಲು ಗೆಲುವಿನ ಆರಂಭದ ಹಂತ ಎಂದು ಹೇಳಿದರು.
ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಊರವರ ಪರವಾಗಿ ಶಿಬಿರಾರ್ಥಿಗಳನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಗಣ್ಯರಾದ ಸಿರಿಯಣ್ಣ ಶೆಟ್ಟಿ, ಚೇತನ್ ಶೆಟ್ಟಿ ಕೊರಳ, ಹೋಟೆಲ್ ಬಾಲಾಜಿ ಇನ್ ನ ಮಾಲಕ ಸತೀಶ್ ಹೆಗ್ಡೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ರೇವತಿ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ನಾಯಕ್ ಉಪಸ್ಥಿತರಿದ್ದರು.
ಉಪನ್ಯಾಸಕ ಶಿವಕುಮಾರ್ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಚಂದ್ರಕಾAತ್ ದಾನಿಗಳ ವಿವರ ನೀಡಿದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಉಮೇಶ್ ವಂದನಾರ್ಪಣೆಗೈದರು.



