ಕಾರ್ಕಳ: ಕಳೆದ ಎರಡು ತಿಂಗಳ ಹಿಂದೆ ಇಬ್ಬರು ಯುವಕರ ನಡುವೆ ನಡೆದ ಜಗಳದ ವಿಚಾರವನ್ನೇ ನೆಪವಾಗಿರಿಸಿದ ಯುವಕರ ತಂಡವು ಇನ್ನೋರ್ವ ಯುವಕನಿಗೆ ದಾರಿಯಲ್ಲಿ ಅಡ್ಡಗಟ್ಟಿ ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಮಂಗಳಾಫಾರ್ಮ್ ಎಂಬಲ್ಲಿ ಶನಿವಾರ ನಡೆದಿದೆ.
ಈದು ಗ್ರಾಮದ ಜಯ (34) ಹಾಗೂ ವಿಘ್ನೇಶ್ ಎಂಬವರಿಗೆ ಕಳೆದ 2 ತಿಂಗಳ ಹಿಂದೆ ನೆಲ್ಲಿಕಾರು ಎಂಬಲ್ಲಿ ಗಲಾಟೆ ಆಗಿದ್ದು, ಈ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಮುಂದಿಟ್ಟುಕೊಂಡ ವಿಘ್ನೇಶ್ ಎಂಬಾತನ ಸಹೋದರ ವಿಕಾಸ್ ಜಯ ಎಂಬವರ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಸಹೋದರ ವಿಘ್ನೇಶ್, ವಿಶ್ವಾಸ್ ಹಾಗೂ ಸತೀಶ್ ಎಂಬವರ ತಂಡ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಕಾರ್ಕಳ ತಾಲೂಕು ಈದು ಗ್ರಾಮದ ಮಂಗಳಾಪಾರ್ಮ್ ಜಂಕ್ಷನ್ ಬಳಿ ತನ್ನ ಸ್ನೇಹಿತ ಸಂದೀಪ್ ನೊಂದಿಗೆ ಬೈಕಿನಲ್ಲಿ ಬರುತ್ತಿದ್ದ ಜಯ ಅವರನ್ನು ಅಡ್ಡಗಟ್ಟಿದೆ. ಈ ತಂಡದಲ್ಲಿದ್ದ ಆರೋಪಿ ವಿಕಾಸ್ ಎಂಬಾತ ಕೈಯಲ್ಲಿ ಚೂರಿ ಹಿಡಿದುಕೊಂಡು ನನ್ನ ತಮ್ಮನಿಗೆ ಹೊಡೆಯುತ್ತೀಯಾ ನಿನ್ನನ್ನು ಇದೇ ಚೂರಿಯಿಂದ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.