ಮುಂಬೈ : ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಲಾಗಿದೆ.ಅವರು ಭಾರತ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಗಂಭೀರ್ ಅವರನ್ನ ಮುಖ್ಯ ಕೋಚ್ ಆಗಿ ಘೋಷಿಸಿದ್ದಾರೆ.
ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಸ್ವಾಗತಿಸಲು ಅಪಾರ ಸಂತೋಷವಾಗುತ್ತಿದೆ. ಆಧುನಿಕ ಕ್ರಿಕೆಟ್ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಗೌತಮ್ ಗಂಭೀರ್ ಈ ಬದಲಾವಣೆಯನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್ನಲ್ಲಿ ಗೌತಮ್ ಗಂಭೀರ್ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಗೌತಮ್ ಗಂಭೀರ್, ಮುಖ್ಯ ಕೋಚ್ ಆಗಿ ಟೀಂ ಇಂಡಿಯಾವನ್ನು ಮುನ್ನಡೆಸಲು ಗೌತಮ್ ಗಂಭೀರ್ ಸೂಕ್ತ ವ್ಯಕ್ತಿ ಅನ್ನೋ ವಿಶ್ವಾಸ ನನಗಿದೆ. ಟೀಂ ಇಂಡಿಯಾ ಮುಂದಿನ ಪಯಣದ ಕುರಿತು ಗಂಭೀರ್ಗೆ ಇರುವ ದೂರದೃಷ್ಟಿ, ಅವರ ಅನುಭವ ತಂಡಕ್ಕೆ ನೆರವಾಗಲಿದೆ. ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಗೌತಮ್ ಗಂಭೀರ್ಗೆ ಬಿಸಿಸಿಐ ಸಂಪೂರ್ಣ ಸಹಕಾರ ನೀಡಲಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
2024ರ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೋಲ್ಕತಾ ನೈಟ್ ರೈಡರ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಮೂಲಕ ಕೆಕೆಆರ್ ಸರಿಸುಮಾರು 10 ವರ್ಷಗಳ ಬಳಿಕ ಟ್ರೋಫಿ ಗೆದ್ದುಕೊಂಡಿತ್ತು. ಗೌತಮ್ ಗಂಭೀರ್ ಕೋಚಿಂಗ್ನಿಂದ ಕೆಕೆಆರ್ ಚಾಂಪಿಯನ್ ಆಗಿ ಕುಣಿದಾಡಿತ್ತು . ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೋಚ್ ಆಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಟಿ20 ವಿಶ್ವಕಪ್ ಟೂರ್ನಿ ನಡುವೆ ಬಿಸಿಸಿಐ ಕೋಚ್ ಆಯ್ಕೆಗೆ ಹುಡುಕಾಟ ತೀವ್ರಗೊಳಿಸಿತ್ತು. ಹಲವು ಅರ್ಜಿಗಳಲ್ಲಿ ಕೆಲವರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿತ್ತು. ಆದರೆ ಗಂಭೀರ್ ಮುಂದಿನ ಕೋಚ್ ಎನ್ನುವ ಮಾತುಗಳು ಎಲ್ಲೆಡೆ ಹರಿದಾಡಿತ್ತು. ಇದೀಗ ಕೋಚ್ ಆಯ್ಕೆ ಅಂತಿಮಗೊಂಡಿದ್ದು, ಗೌತಮ್ ಗಂಭೀರ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
