ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ‘ ಸಪ್ತಸ್ವರ ‘ ವೇದಿಕೆಯಲ್ಲಿ ಜುಲೈ 24ರಂದು ವಿದ್ಯಾರ್ಥಿಗಳ ಸಮ್ಮುಖದಲ್ಲಿ “ಕಾನೂನು ಅರಿವು” ಮಾಹಿತಿ ಕಾರ್ಯಕ್ರಮ ಜರುಗಿತು.
ಮಾಹಿತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾರ್ಕಳ ಪೊಲೀಸ್ ಉಪನಿರೀಕ್ಷಕರಾದ ಸುಬ್ರಹ್ಮಣ್ಯ ಎಚ್, ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ’ ಎಂದರು.
ಕಾನ್ಸ್ಟೇಬಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರವೀಂದ್ರ ಹಾಗೂ ಘನಶ್ಯಾಮ್ ರವರು ಉಪಸ್ಥಿತರಿದ್ದರು.
‘ಕಾನೂನು ಅರಿವು’ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು, ವಸತಿ ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು, ಬೋಧಕೇತರ ಸಿಬ್ಬಂದಿ ವರ್ಗದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕನ್ನಡ ಭಾಷಾ ಉಪನ್ಯಾಸಕರಾದ ಶಿವಕುಮಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಉಮೇಶ್ ವಂದನಾರ್ಪಣೆಗೈದರು.


`