ಕಾರ್ಕಳ: ವೇದಜ್ಞಾನದ ಮೂಲ ಸಂಸ್ಕಾರವು ತಂದೆಯಿಂದ ಮಕ್ಕಳಿಗೆ ನಂತರ ಹೆಚ್ಚಿನ ಜ್ಞಾನವು ಗುರುಗಳಿಂದ ಶಿಷ್ಯರಿಗೆ ಪಾರಂಪರಿಕವಾಗಿ ದೊರೆಯುವ ವಿದ್ಯೆಯಾಗಿದೆ. ಮುಂಡಕವು ಜ್ಞಾನಕ್ಕೆ ಸಂಬಂಧಿಸಿದ ಉಪನಿಷತ್ತು ಆಗಿದ್ದು ಇದನ್ನು ಸಂಹಿತಾ ಉಪನಿಷತ್ತು ಎಂಬುದಾಗಿಯೂ ಕರೆಯಲಾಗುತ್ತಿದೆ ಎಂದು ವೇದಾಂತ ಹಾಗೂ ಯೋಗ ಪ್ರವೀಣರಾದ ಡಾ.ಶಶಾಂಕ ಹತ್ವಾರ್ ಅವರು ತಿಳಿಸಿದರು.
ಅವರು ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ಆಗಸ್ಟ್ 17ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮದಲ್ಲಿ ಅವರು ಮುಂಡಕ ಉಪನಿಷತ್ತು ಇದರ ಕುರಿತು ಉಪನ್ಯಾಸ ನೀಡಿದರು.
ಯಾವುದನ್ನು ತಿಳಿದುಕೊಂಡಾಗ ಎಲ್ಲವನ್ನೂ ತಿಳಿದುಕೊಂಡAತಾಗುವುದೋ ಅದನ್ನೇ ಪರಾವಿದ್ಯೆ, ಬ್ರಹ್ಮಜ್ಞಾನ, ಮೋಕ್ಷ ಎನ್ನಲಾಗುತ್ತದೆ. ನಮ್ಮೊಳಗೆ ಪ್ರತಿಯೊಬ್ಬರಲ್ಲಿಯೂ ಭಗವಂತನ ವಿಶೇಷ ಚೇತನವಿದ್ದು ಸಾಧನೆಯಿಂದ ಆ ಚೈತನ್ಯ ಸ್ವರೂಪದ ಅರಿವಾಗುತ್ತದೆ. ಲೌಕಿಕದಲ್ಲಿದ್ದುಕೊಂಡೇ ಈ ಬ್ರಹ್ಮಜ್ಞಾನವನ್ನು ಹೊಂದಬಹುದಾಗಿದೆ. ವೇದಾಂತವು ಸ್ವಂತ ಅಧ್ಯಯನದಿಂದ ಕಲಿಯುವ ವಿದ್ಯೆಯಾಗಿರದೆ ಇದು ಒಬ್ಬರಿಗೆ ಅಥವಾ ಒಂದು ಪಂಗಡಕ್ಕೆ ಸೀಮಿತವೂ ಆಗಿರದೆ ಯೋಗ್ಯತೆ ಇರುವ ಎಲ್ಲರೂ ವೇದೋಪನಿಷತ್ತುಗಳನ್ನು ಕಲಿಯಬಹುದಾಗಿದೆ ಎಂದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್ವೈಸ್ ಮಾರ್ಷಲ್ ಶ್ರೀ ರಮೇಶ್ ಕಾರ್ಣಿಕ್, ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶಾರ್ವರಿಯವರು ಪ್ರಾರ್ಥಿಸಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿ ಶ್ರೀ ಸುಧಾಕರ್ ಶ್ಯಾನುಭೋಗ್ ಅವರು ಅತಿಥಿಗಳನ್ನು ಪರಿಚಯಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಶ್ರೀಮತಿ ಸುಲೋಚನಾ ಬಿ.ವಿ. ವಂದಿಸಿದರು.
























`
