Share this news

ಕಾರ್ಕಳ : ಕಾರ್ಕಳ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಹಿಂದಿನ ಬಿಜೆಪಿ ಸರಕಾರ ಮಂಜೂರು ಮಾಡಿದ್ದ ರೂ. 6 ಕೋಟಿ ಅನುದಾನದಲ್ಲಿ ಈವರೆಗೆ ಕೇವಲ ರೂ. 75 ಲಕ್ಷ ಅನುದಾನವನ್ನು ಮಾತ್ರ ಬಿಡುಗಡೆ ಮಾಡಿದ್ದು, ಬಾಕಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕಾರ್ಕಳ ಎಸ್ ಸಿ ಮೋರ್ಚಾ ಅಧ್ಯಕ್ಷ ಸಂಜೀವ ಮಾಳ ಆಗ್ರಹಿಸಿದ್ದಾರೆ.

ಬಾಕಿ ಅನುದಾನವನ್ನು ಬಿಡುಗಡೆ ಮಾಡದೇ ಕಾಂಗ್ರೆಸ್‌ ಸರಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರಾದ ವಿ ಸುನಿಲ್‌ ಕುಮಾರ್‌ ಅವರ ವಿಶೇಷ ಮುತುವರ್ಜಿಯಲ್ಲಿ ಕಾರ್ಕಳದ ಕಾಬೆಟ್ಟು ಎಂಬಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್‌ ಭವನಕ್ಕೆ ರೂ.6.00 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ, ಭವ್ಯವಾದ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಪ್ರಸ್ತುತ ಸದ್ರಿ ಕಾಮಗಾರಿಯ ಒಟ್ಟು ಯೋಜನಾ ವೆಚ್ಚದ ರೂ. 6.00 ಕೋಟಿ ಅನುದಾನದಲ್ಲಿ ಕೇವಲ ರೂ. 75.00 ಲಕ್ಷ ಅನುದಾನ ಮಾತ್ರ ಬಿಡುಗಡೆ ಆಗಿದ್ದು, ಈಗಿನ ಕಾಂಗ್ರೆಸ್‌ ಸರಕಾರವು ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಯ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡದೆ ಇರುವುದರಿಂದ ನಿರ್ಮಾಣ ಕಾಮಗಾರಿಯ ವಿಳಂಬವಾಗಿದ್ದು, ಕಾಮಗಾರಿ ಪೂರ್ಣವಾಗದೆ ಸಮುದಾಯದ ಜನರ ಕಾರ್ಯ ಚಟುವಟಿಕೆಗೆ ತುಂಬಾ ತೊಂದರೆಯಾಗುತ್ತಿದೆ.

ದಲಿತರು, ಹಿಂದುಳಿದವರು ಹಾಗೂ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರೇಳಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರವು ಈಗ ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಸಮುದಾಯದ ಜನರಿಗೆ ದ್ರೋಹವೆಸಗುತ್ತಿದೆ. ಕಾರ್ಕಳ ತಾಲೂಕು ಅಂಬೇಡ್ಕರ್‌ ಭವನ ಸೇರಿದಂತೆ ಹೆಬ್ರಿ ಹಾಗೂ ಇತರ ಅಂಬೇಡ್ಕರ್‌ ಭವನಗಳ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸಮುದಾಯದ ಜನತೆಯ ಪರವಾಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *