ಉಡುಪಿ: ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಜ್ಞಾನ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯ
ಸ್ಫೂರ್ತಿದಾಯಕವಾದದ್ದು. ಭಯದಿಂದ ಕಾಣುವ ನಾಗದೇವರನ್ನು ನಾಗಪ್ರತಿಷ್ಠೆ ಮತ್ತು ನಾಗಬ್ರಹ್ಮಮಂಡಲೋತ್ಸವ ಮಾಡುವ ಮೂಲಕ ನಾಗದೇವರನ್ನು ಒಲಿಸಿಕೊಂಡಿರುವ ಅವರ ಕಾರ್ಯ ನಿತ್ಯನೂತನವಾಗಿರಲಿ ಎಂದು ಉಡುಪಿ ಕೃಷ್ಣಾಪುರ ಮಠದ ಸ್ವಾಮೀಜಿಗಳಾದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳು ಹೇಳಿದರು.
ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಕಡಿಯಾಳಿ ಇಲ್ಲಿನ ಆವರಣದಲ್ಲಿ ನಡೆಯುತ್ತಿರುವ ನಾಗಬ್ರಹ್ಮ ರಕ್ತೇಶ್ವರಿ ಕ್ಷೇತ್ರದ ಪುನರ್ ಪ್ರತಿಷ್ಠೆ ಮತ್ತು ನಾಗಬ್ರಹ್ಮಮಂಡಲೋತ್ಸವದ ಪ್ರಯುಕ್ತ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಮ ಪೂಜ್ಯ ಸ್ವಾಮೀಜಿಗಳಿಂದ ಪಡೆದ ಈ ಪುಣ್ಯ ಭೂಮಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ರೀಗಳ ಆಶೀರ್ವಾದದಂತೆ ಭಾವಿಸುತ್ತೇನೆ. ನಾಗಮಂಡಲ, ನಾಡಿಗೆ ಮಂಗಲವಾಗಿ ಮತ್ತು ನಾಗಪ್ರತಿಷ್ಠೆ, ನಾಡಿನ ಪ್ರತಿಷ್ಠೆಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ, ವಿಶೇಷಚೇತನರಿಗೆ, ಸಮಾಜಸೇವಾ ಟ್ರಸ್ಟ್ಗಳಿಗೆ ಒಟ್ಟು 8 ಲಕ್ಷದ 60 ಸಾವಿರದಷ್ಟು ಮೊತ್ತವನ್ನು ಸಹಾಯಧನ ರೂಪವಾಗಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ನೀಡಲಾಯಿತು.
ವೇದಿಕೆಯಲ್ಲಿ ವೇದಮೂರ್ತಿ ರಾಮಕೃಷ್ಣ ತಂತ್ರಿ, ಮಾರ್ಗದರ್ಶಕರಾದ ನಾರಾಯಣ ಭಟ್ ರೆಂಜಾಳ ಉಪಸ್ಥಿತರಿದ್ದರು.