
ಮಂಗಳೂರು: ದಕ್ಷಿಣ ಕನ್ನಡ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹೈನುಗಾರರ ಬಳಗವು ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಗೆ ಏರಿದ್ದು,ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ತೀವ್ರ ಹಿನ್ನಡೆಯಾಗಿದೆ.
ಈ ಮೂಲಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಬಣವು ಮೇಲುಗೈ ಸಾಧಿಸಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು16 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಹೈನುಗಾರರ ಬಳಗ 10 ಸ್ಥಾನ ಪಡೆದರೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೇವಲ 6 ಸ್ಥಾನವನ್ನು ಗೆದ್ದುಕೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ಬೆಳಪು ನೇತೃತ್ವದ ಹೈನುಗಾರರ ಬಳಗದ ಅಭ್ಯರ್ಥಿಗಳು ಎಂಟಕ್ಕೆ ಎಂಟೂ ಸ್ಥಾನವನ್ನೂ ಗೆದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಮತ್ತು ಇಬ್ಬರು ಹೈನುಗಾರರ ಬಳಗದವರು ಗೆಲುವು ಸಾಧಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ (165), ಉದಯ ಕೋಟ್ಯಾನ್(172 ಮತ), ಎಸ್.ಪ್ರಕಾಶ್ಚಂದ್ರ ಮೇಕೋಡು (185), ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ(-145), ಕೊಡವೂರು ರವಿರಾಜ ಹೆಗ್ಡೆ (220), ಕೆ.ಶಿವಮೂರ್ತಿ ಉಪಾಧ್ಯ(124), ಮುಡಾರು ಸುಧಾಕರ ಶೆಟ್ಟಿ(162), ಹದ್ದೂರು ಮಮತಾ ಶೆಟ್ಟಿ(190) ಗೆಲುವು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಎಲ್ಲಾ ಅಭ್ಯರ್ಥಿಗಳಿಗೂ ಸೋಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.
ಕೆ.ಚಂದ್ರಶೇಖರ ರಾವ್ (169 ಮತ), ಎಸ್.ಬಿ ಜಯರಾಮ ರೈ 190, ಹೆಚ್.ಪ್ರಭಾಕರ್ 157, ಭರತ್ ಎನ್ 173, ಸುಧಾಕರ ರೈ 97 ಮತ್ತು ಮಹಿಳಾ ಕೋಟಾದಿಂದ ಸ್ಪರ್ಧಿಸಿದ್ದ ಸವಿತಾ ಶೆಟ್ಟಿ(235 ಮತ) ಗೆಲುವು ಕಂಡಿದ್ದಾರೆ.
ದ.ಕ ಜಿಲ್ಲೆಯ ಕಾಂಗ್ರೆಸ್ ಬೆಂಬಲಿತ ಹೈನುಗಾರರ ಬಳಗದಿಂದ ಸ್ಪರ್ಧಿಸಿದ್ದ ಸುಚರಿತ ಶೆಟ್ಟಿ-99 ಮತ್ತು ನಂದರಾಮ ರೈ-97 ಪ್ರಯಾಸದಲ್ಲಿ ಗೆಲುವು ಕಂಡಿದ್ದಾರೆ.
ಎರಡು ಜಿಲ್ಲೆಯ ವ್ಯಾಪ್ತಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟಕ್ಕೆ 16 ಸದಸ್ಯರಿದ್ದು, 10-6 ಅಂತರದಲ್ಲಿ ಹೈನುಗಾರರ ಬಳಗ ಗೆಲುವು ದಾಖಲಿಸಿದೆ.
ದ.ಕ ಹಾಲು ಒಕ್ಕೂಟದ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಚರಿತ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಇವರು ಬಿಜೆಪಿ ಬೆಂಬಲಿತರ ವಿರುದ್ಧವಾಗಿ ಕೈ ಬೆಂಬಲಿತ ಹೈನುಗಾರರ ಬಳಗದ ಅಭ್ಯರ್ಥಿಗಳಾಗಿ ಸ್ವರ್ಧಾ ಕಣಕ್ಕೆ ಇಳಿದಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮುಂದಿಟ್ಟು ಆರು ವರ್ಷ ಅವಧಿಗೆ ಉಚ್ಚಾಟಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಅದೇಶ ಹೊರಡಿಸಿದ್ದರು.ಆದರೆ ತಾನು ಸ್ವತಂತ್ರ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದರು. ಬಿಜೆಪಿಯಿಂದ ಅಮಾನತುಗೊಂಡರೂ ಉದಯಕೋಟ್ಯಾನ್ ಅವರು ಜಯಭೇರಿಗಳಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಆರಂಭದಲ್ಲೇ ಬಿಜೆಪಿಯ ಸಹಕಾರ ಭಾರತಿಯ ಸಂಘಟನೆಯಲ್ಲಿ ಒಡಕು ಮೂಡಿದ್ದು,ಹಾಗೂ ಕಾಂಗ್ರೆಸ್ ಬೆಂಬಲಿತ ಹೈನುಗಾರರ ಬಳಗವು ಸಂಘಟನಾತ್ಮಕ ಹೋರಾಟದ ಫಲವಾಗಿ ಅಧಿಕಾರ ತನ್ನದಾಗಿಸಿಕೊಂಡಿದೆ




