ಬೆಂಗಳೂರು: ಸಧ್ಯಕ್ಕೆ ನಮ್ಮ ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿಲ್ಲ ಆರ್ಥಿಕವಾಗಿ ಸರ್ಕಾರ ಸಧೃಢವಾಗಿದೆ, ನಮ್ಮ ಪಕ್ಷದ ಶಾಸಕ ರಾಜುಕಾಗೆ ಮನಸ್ಸಿನ ಬೇಸರದಿಂದ ಹೀಗೆ ಮಾತನಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಅನುದಾನ ಕೊರತೆಯ ಕುರಿತು ಸ್ವಪಕ್ಷ ಶಾಸಕ ರಾಜು ಕಾಗೆ ಅಸಮಾಧಾನ ಹೊರಹಾಕಿದ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ಕೆಲವು ಸಲ ಕ್ಷೇತ್ರದ ಶಾಸಕರ ಅನುದಾನ ಬಿಡುಗಡೆ ವಿಳಂಬವಾಗುತ್ತದೆ. ಈ ಕುರಿತು ಶಾಸಕರಿಗೆ ಮನದಟ್ಟು ಮಾಡಲಾಗುತ್ತದೆ ಎಂದು ಡಾ.ಪರಮೇಶ್ವರ್ ಹೇಳಿದ್ದಾರೆ.
ರಾಜ್ಯದ ಪ್ರಸ್ತುತ ಆಡಳಿತ ವ್ಯವಸ್ತೆಯಿಂದ ನನಗೆ ತುಂಬಾ ನೋವಾಗಿದೆ. ಎರಡು ದಿನದಲ್ಲಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟರು ಯಾವುದೇ ಆಶ್ಚರ್ಯವಿಲ್ಲ ಎಂದು ರಾಜು ಕಾಗೆ ಸ್ಪೋಟಕವಾದ ಹೇಳಿಕೆ ನೀಡಿದ್ದರು. ತಮ್ಮ ಸರ್ಕಾರದ ವಿರುದ್ಧವೇ ಶಾಸಕರ ಇಂತಹ ಹೇಳಿಕೆಗಳು ವಿಪಕ್ಷ ಬಿಜೆಪಿಗೆ ಅಸ್ತç ಸಿಕ್ಕಂತಾಗಿದೆ