ಕಾರ್ಕಳ: ತನ್ನ ಇಬ್ಬರು ಗಂಡು ಮಕ್ಕಳ ವಿಪರೀತ ಕುಡಿತದ ಚಟಕ್ಕೆ ಮನನೊಂದ ತಾಯಿ ನೇಣಿಗೆ ಶರಣಾಗಿದ್ದಾರೆ.
ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬಾರಾಡಿ ನಿವಾಸಿ ಗಿರಿಜಾ(59) ಎಂಬವರು ಮಂಗಳವಾರ ರಾತ್ರಿ ತನ್ನ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಿರಿಜಾ ಪೂಜಾರಿಯವರ ಇಬ್ಬರು ಗಂಡು ಮಕ್ಕಳಾದ ಅಶೋಕ ಹಾಗೂ ಅಜಿತ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು ವಿಪರೀತ ಕುಡಿತದ ಚಟ ಹೊಂದಿದ್ದರು. ಇವರಿಬ್ಬರು ತನ್ನ ತಾಯಿಯ ಮನೆಯ ಸಮೀಪವೇ ಸಣ್ಣ ಮನೆ ಕಟ್ಟಿಕೊಂಡು ವಾಸವಿದ್ದರು.ಈ ಪೈಕಿ ಅಜಿತ ಎಂಬವರಿಗೆ ವಿವಾಹವಾಗಿದ್ದು ಅತ ಪತ್ನಿಯನ್ನು ಬಿಟ್ಟಿದ್ದು,ಅಶೋಕ ಅವಿವಾಹಿತರಾಗಿದ್ದಾರೆ. ಪ್ರತ್ಯೇಕ ಮನೆ ಮಾಡಿಕೊಂಡಿದ್ದರೂ ತಾಯಿ ಗಿರಿಜಾ ಅವರು ತನ್ನ ಮಕ್ಕಳಿಗೆ ಊಟ ತಂದು ಕೊಡುತ್ತಿದ್ದರು. ಒಂದೇ ಮನೆಯಲ್ಲಿ ಅಣ್ಣ ತಮ್ಮಂದಿರು ಇಬ್ಬರು ವಾಸವಿದ್ದರೂ ಕುಡಿದುಕೊಂಡು ಬಂದು ಪ್ರತಿನಿತ್ಯ ಪರಸ್ಪರ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ತಾಯಿ ಗಿರಿಜಾ ತುಂಬಾ ನೊಂದುಕೊಂಡಿದ್ದರು.
ಎಂದಿನಂತೆ ಜೂ.03 ರಂದು ಮಂಗಳವಾರ ಅಶೋಕ ಹಾಗೂ ಅಜಿತ ಕುಡಿದು ಬಂದು ಕಲ್ಲಿನಿಂದ ಪರಸ್ಪರ ಹೊಡೆದಾಡಿಕೊಂಡು ಜಗಳವಾಡುತ್ತಿದ್ದಾಗ ತಾಯಿ ಗಿರಿಜಾ ಎಷ್ಟು ಹೇಳಿದರೂ ಕೇಳದಾಗ ಇದೇ ನೋವಿನಿಂದ ಅವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಜನ್ಮ ನೀಡಿದ ಮಕ್ಕಳೇ ಅಮ್ಮನ ಪಾಲಿಗೆ ಕಂಟಕವಾಗಿರುವುದು ವಿಪರ್ಯಾಸ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.